ಚಿಕ್ಕಮಗಳೂರು: ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಮಂಗಳವಾರ ಆರಂಭವಾಗಿರುವ ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಬುಧವಾರ ತುಸು ಹಿನ್ನಡೆ ಉಂಟಾಗಿದೆ.
ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ- ಈ ನಾಲ್ಕೂ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆದಿದ್ದರೂ ನಕ್ಸಲರು ಈವರೆಗೂ ಪೊಲೀಸರ ಕಣ್ಣಿಗೆ ಬಿದ್ದಿಲ್ಲ ಎಂದು ಮೂಲಗಳು ತಿಳಿಸಿವೆ.
ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಇನ್ಫೆಂಟ್, ಬುಧವಾರ ಉಡುಪಿ- ಹೆಬ್ರಿ- ಕೆರೆಕಟ್ಟೆಗಳಲ್ಲಿ ಕಾರ್ಯಾಚರಣೆ ಪರಿಶೀಲಿಸಿ ಶೃಂಗೇರಿಯಲ್ಲಿ ಮೊಕ್ಕಾಂ ಮಾಡಿದ್ದಾರೆ. ಅವರ ಜತೆಗೆ ಹಿರಿಯ ಅಧಿಕಾರಿಗಳ ತಂಡವೂ ಇದ್ದು ಇಡೀ ಕಾರ್ಯಾಚರಣೆಯ ರಣತಂತ್ರವನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದೆ.
ಈ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನತೆ ಧೈರ್ಯವಾಗಿ ತಮ್ಮ ಕುಟುಂಬದ ವಿವರಗಳನ್ನು ಪೊಲೀಸರಿಗೆ ನೀಡುತ್ತಿದ್ದಾರೆ ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಇದು ಪೊಲೀಸರಿಗೆ ತರಬೇತಿ ನೀಡುವ ಉದ್ದೇಶದಿಂದ ನಡೆಸುತ್ತಿರುವ ಪ್ರಾಯೋಗಿಕ ಕಾರ್ಯಾಚರಣೆ. ಮುಂದಿನ ದಿನಗಳಲ್ಲಿ ಇಂಥ ಮತ್ತಷ್ಟು ಕಾರ್ಯಾಚರಣೆಗಳು ವ್ಯವಸ್ಥಿತವಾಗಿ ನಡೆಯುತ್ತವೆ ಎಂಬ ಮಾತೂ ಪೊಲೀಸ್ ಮೂಲದಿಂದ ಕೇಳಿಬಂದಿದೆ.