ಮುಂಬೈ(ಐಎಎನ್ಎಸ್): ಉಗ್ರರ ದಾಳಿ, ಬಲಿಯಾದ ಅಮಾಯಕರು, ಹುತಾತ್ಮರಾದ ಯೋಧರು, ಅಲ್ಲೋಲ ಕಲ್ಲೋಲವಾದ ರಾಜಕಾರಣ, ದಿಗ್ಭ್ರಾಂತ ದೇಶ... ಮುಂಬೈ ದಾಳಿ ನಡೆದು ವರ್ಷ ಕಳೆಯುತ್ತಿದೆ. ತನಿಖೆಗಳು ನಡೆದಿವೆ ವಿಚಾರಣೆಗಳು ಸಾಗುತ್ತಿವೆ. ಚೇತರಿಸಿಕೊಂಡ ಮಹಾನಗರ ಮತ್ತೆ ತನ್ನದೇ ವ್ಯವಹಾರಗಳಲ್ಲಿ ಮುಳುಗಿ ಹೋಗಿದೆ ಆದರೆ ಒಂದು ಪ್ರಶ್ನೆಗೆ ಮಾತ್ರ ಇನ್ನೂ ಉತ್ತರ ಸಿಕ್ಕಿಲ್ಲ- ಅದು ಮುಂಬೈಗೆ ಸಂಪೂರ್ಣ ಭದ್ರತೆ ಸಾಧ್ಯವೇ?
ಕರಾವಳಿ ಪ್ರದೇಶಗಳಲ್ಲಿ ಕಟ್ಟೆಚ್ಚರ, ದೇಶದ ವಾಣಿಜ್ಯ ನಗರಿಯ ಪ್ರಧಾನ ಕಟ್ಟಡಗಳಿಗೆ ಬಿಗಿ ಭದ್ರತೆ, ನಗರದ ಜೀವಾಳವೇ ಆಗಿರುವ ರೈಲ್ವೆ ಜಾಲಕ್ಕೆ ಸೂಕ್ತ ರಕ್ಷಣೆಯ ಕಾರ್ಯಗಳು ಚುರುಕುಗೊಂಡಿರುವುದು ನಿಜವಾದರೂ ಇದಷ್ಟೇ ಸಾಲದು ಎಂಬ ಮಾತು ಕೇಳಿ ಬರುತ್ತಿದೆ.
ವರ್ಷದ ಹಿಂದೆ ಕಾಣದಿದ್ದ ಭದ್ರತಾ ಕಾರ್ಯವನ್ನು ಈಗ ನಗರದಲ್ಲಿ ನೋಡಬಹುದು. ಆದರೆ ಈ ಕಾರ್ಯ ಇನ್ನೂ ಪ್ರಗತಿಯ ಹಂತದಲ್ಲಿದೆ. ಭದ್ರತೆ ಬಗ್ಗೆ ವಿಶ್ವಾಸದಿಂದ ಮಾತನಾಡುವುದು ಇನ್ನೂ ಸಾಧ್ಯವಾಗುತ್ತಿಲ್ಲ ಎಂದು ಮುಂಬೈ ಪೊಲೀಸ್ ಕಮಿಷನರ್ ಡಿ. ಶಿವನಂದನ್ ತಿಳಿಸುತ್ತಾರೆ.
ಇನ್ನೆಂದೂ ಮುಂಬೈ ಮೇಲೆ ದಾಳಿ ನಡೆಯಬಾರದು ಎಂದು ಅಧಿಕಾರಿಗಳು ಪಣ ತೊಟ್ಟಿದ್ದಾರೆ. ಮುಂಬೈ ಪೊಲೀಸರನ್ನೂ ಒಳಗೊಂಡಂತೆ ವಿವಿಧ ಭದ್ರತಾಪಡೆಗಳು ದೇಶದ ಪಶ್ಚಿಮ ಕರಾವಳಿಯನ್ನು ಎಚ್ಚರದಿಂದ ಕಾಯುತ್ತಿವೆ. ಕಳೆದ ವಾರ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ನಿರ್ಮಲ್ ವರ್ಮಾ ಅವರು ಪಶ್ಚಿಮ ನೌಕಾದಳದ ಕಾರ್ಯಕ್ಷಮತೆ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಿದ್ದರು.
ಸಾಗರದಲ್ಲಿ ಪ್ರತಿದಾಳಿ ನಡೆಸಬಲ್ಲ ಐದು ಜಲಾಂತರ್ಗಾಮಿಗಳನ್ನು ಹೊಂದಲು ನೌಕಾಪಡೆ ನಿರ್ಧರಿಸಿದೆ. 46 ಕರಾವಳಿ ರೆಡಾರ್ಗಳು ಹಾಗೂ 9 ಕರಾವಳಿ ರಕ್ಷಣಾ ಪಡೆ ಕೇಂದ್ರಗಳ ನಡುವೆ ಸಂಪೂರ್ಣ ಸಂಪರ್ಕ ಕಲ್ಪಿಸಲು ಯತ್ನಿಸಲಾಗುತ್ತಿದೆ.
ಗೋವಾದಲ್ಲಿ 4.5 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಗುಂಡುನಿರೋಧಕ ದೋಣಿಗಳನ್ನು ಖರೀದಿಸಲಾಗಿದೆ.
ಮಹಾರಾಷ್ಟ್ರ ಸರ್ಕಾರ ಪೊಲೀಸ್ ಇಲಾಖೆಯ ಆಧುನೀಕರಣಕ್ಕಾಗಿ ರೂ. 63 ಕೋಟಿ ವಿನಿಯೋಗಿಸಿದೆ. ನಗರದ ಆಯಾಕಟ್ಟಿನ ಪ್ರದೇಶದಲ್ಲಿ ಲೋಹ ಪರಿಶೋಧಕಗಳು, ಶ್ವಾನಪಡೆ, ಬಂದೂಕುಧಾರಿ ಭಧ್ರತಾ ಸಿಬ್ಬಂದಿಗಳ ನೇಮಕವನ್ನು ದ್ವಿಗುಣಗೊಳಿಸಲಾಗಿದೆ.
ಆದರೆ ನಗರದ ಹೆಚ್ಚು ಜನ ಸಂದಣಿಯುಳ್ಳ ಛತ್ರಪತಿ ಶಿವಾಜಿ ಟರ್ಮಿನಸ್ಗೆ ಸಂಪೂರ್ಣ ಭದ್ರತೆ ಸಾಧ್ಯವಾಗಿಲ್ಲ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ಅಭಿಪ್ರಾಯಪಟ್ಟಿದೆ.
ತೆರೆಮರೆಯ ಯೋಧರು...
ಉಗ್ರರ ದಾಳಿಗೆ ತುತ್ತಾಗಿ ಮುಂಬೈ ಹೊತ್ತಿ ಉರಿಯುತ್ತಿದ್ದಾಗ ಬೆಂಕಿಯ ಜ್ವಾಲೆಗಳ ಜತೆಗೆ ಗುಂಡಿನ ಸುರಿಮಳೆಯನ್ನೂ ಎದುರಿಸಿದವರು ಅಗ್ನಿ ಶಾಮಕ ದಳದ ಸಿಬ್ಬಂದಿ. ಜೀವದ ಹಂಗು ತೊರೆದು ನೂರಾರು ಮುಗ್ಧರನ್ನು ಅಪಾಯದಿಂದ ಪಾರು ಮಾಡಿದವರು ಇವರು.
ಆದರೆ ಇವರ ಕಾರ್ಯ ಜನರ ಗಮನ ಸೆಳೆದಿದ್ದು ಕಡಿವೆು. ಬೃಹತ್ ಮುಂಬೈ ಮಹಾನಗರ ಪಾಲಿಕೆ ಇವರ ಕಾರ್ಯವನ್ನು ಮೆಚ್ಚಿ ಶೌರ್ಯ ಪ್ರಶಸ್ತಿ ಘೋಷಿಸಿದ್ದರೂ ಅದು ಇನ್ನೂ ಅವರ ಕೈ ಸೇರಿಲ್ಲ.
ದಾಳಿ ನಡೆದ ಕಡೆ ಅಗ್ನಿ ಶಾಮಕ ದಳ ಸತತ ಮೂರು ದಿನಗಳ ಕಾಲ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿತ್ತು. ಯಾವುದೇ ಶಸ್ತ್ರಾಸ್ತ್ರ ಹೊಂದಿರದ 1200ಕ್ಕೂ ಅಗ್ನಿ ಶಾಮಕ ಸಿಬ್ಬಂದಿ ಉಗ್ರರ ಎದುರೇ 400 ಮಂದಿಯನ್ನು ರಕ್ಷಿಸಿದ್ದರು.