 |
| ಮಲಬಾರ್ ಗೋಲ್ಡ್ ಆರಂಭಿಸಿರುವ ‘ವಿವಾಹ ಮಹೋತ್ಸವ’ಕ್ಕೆ ಚಿತ್ರ ನಟ ಪುನೀತ್ ರಾಜ್ಕುಮಾರ್, ಶುಕ್ರವಾರ ಬೆಂಗಳೂರಿನಲ್ಲಿ ಚಾಲನೆ ನೀಡಿದರು. ಮಲಬಾರ್ ಸಮೂಹದ ಅಧ್ಯಕ್ಷ ಎಂ. ಪಿ. ಅಹ್ಮದ್ (ಎಡಬದಿ) ಮತ್ತು ಪ್ರಾದೇಶಿಕ ನಿರ್ದೇಶಕ ಒ. ಅಶರ್ ಉಪಸ್ಥಿತರಿದ್ದರು. |
ಬೆಂಗಳೂರು: ವಿವಾಹದ ಸಂಭ್ರಮಕ್ಕೆ ಇನ್ನಷ್ಟು ಮೆರುಗು ನೀಡಲು ಮಲಬಾರ್ ಗೋಲ್ಡ್, ರಾಜ್ಯದಲ್ಲಿನ ತನ್ನ ಎಲ್ಲ ಮಾರಾಟ ಮಳಿಗೆಗಳಲ್ಲಿ ಆಚರಿಸಲಿರುವ ‘ವಿವಾಹ ಮಹೋತ್ಸವ’ಕ್ಕೆ ಸಂಸ್ಥೆಯ ಪ್ರಚಾರ ರಾಯಭಾರಿ ಆಗಿರುವ ಚಿತ್ರ ನಟ ಪುನೀತ್ ರಾಜ್ಕುಮಾರ್ ಶುಕ್ರವಾರ ಇಲ್ಲಿ ಚಾಲನೆ ನೀಡಿದರು.
ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಲ್ಲಿ ಇರುವ ಮಲಬಾರ್ ಗೋಲ್ಡ್ ಮಾರಾಟ ಮಳಿಗೆಗಳಲ್ಲಿ ಈ ಉತ್ಸವ ನಾಳೆಯಿಂದ (ಅಕ್ಟೋಬರ್ 10ರಿಂದ) ಡಿಸೆಂಬರ್ 15ರವರೆಗೆ ನಡೆಯಲಿದೆ.
ವಿವಾಹ ಸಮಾರಂಭ ಹೆಚ್ಚು ಸ್ಮರಣೀಯಗೊಳಿಸಲು ನುರಿತ ಕುಶಲಕರ್ಮಿಗಳು ತಯಾರಿಸಿದ ಆಕರ್ಷಕ ವಿನ್ಯಾಸದ ಮದುವೆ ಆಭರಣಗಳು ಈ ಸಂದರ್ಭದಲ್ಲಿ ಪ್ರದರ್ಶನ ಮತ್ತು ಖರೀದಿಗೆ ಲಭ್ಯ ಇರಲಿವೆ. ಈ ಅವಧಿಯಲ್ಲಿ ಕನಿಷ್ಠ 30 ಗ್ರಾಂಗಳಷ್ಟು ಚಿನ್ನಾಭರಣ ಖರೀದಿಸಿದ ದಂಪತಿಗಳಲ್ಲಿ ಲಾಟರಿ ಮೂಲಕ ಅದೃಷ್ಟವಂತರನ್ನು ಆಯ್ಕೆ ಮಾಡಿ ಥಾಯ್ಲೆಂಡ್ ಇಲ್ಲವೇ ಮಲೇಷ್ಯಾಕ್ಕೆ ಮಧುಚಂದ್ರಕ್ಕೆ ಕಳಿಸಲಾಗುವುದು.
ಪ್ರತಿ ವಾರ ಲಾಟರಿ ನಡೆಸಲಾಗುವುದು. ಇನ್ನೂ ಕೆಲವು ಅದೃಷ್ಟಶಾಲಿ ದಂಪತಿಗಳು ಪುನೀತ್ ರಾಜ್ಕುಮಾರ್ ಅವರೊಂದಿಗೆ ಪಂಚಾತಾರಾ ಹೋಟೆಲ್ನಲ್ಲಿ ಔತಣಕೂಟದಲ್ಲಿ ಭಾಗಿಯಾಗಬಹುದು. ಪ್ರತಿ ಖರೀದಿ ಜತೆ ಗ್ರಾಹಕರು ಚಿನ್ನದ ನಾಣ್ಯವನ್ನೂ ಉಡುಗೊರೆಯಾಗಿ ಪಡೆಯಲಿದ್ದಾರೆ.
ವಹಿವಾಟು ವಿಸ್ತರಣೆ: ಹುಬ್ಬಳ್ಳಿ, ಉಡುಪಿ, ದಾವಣಗೆರೆ ಮತ್ತು ಹಾಸನದಲ್ಲಿ ಶೀಘ್ರದಲ್ಲಿಯೇ ಮಳಿಗೆಗಳನ್ನು ಆರಂಭಿಸಲಾಗುವುದು. ಬೆಂಗಳೂರಿನಲ್ಲಿಯೂ ಇನ್ನೊಂದು ಹೊಸ ಮಳಿಗೆ ತೆರೆಯಲಾಗುವುದು. ವಿವಾಹ ಮಹೋತ್ಸವದಂತಹ ಖರೀದಿ ಉತ್ತೇಜಿಸುವ ಮತ್ತು ವಿಶಿಷ್ಟ ಸಂದರ್ಭಗಳ ಸಂಭ್ರಮ ಹೆಚ್ಚಿಸುವ ಚಿನ್ನಾಭರಣ ಉತ್ಸವಗಳನ್ನು ಪ್ರತಿ ವರ್ಷ ಹಮ್ಮಿಕೊಳ್ಳಲಾಗುವುದು ಎಂದು ಮಲಬಾರ್ ಸಮೂಹದ ಅಧ್ಯಕ್ಷ ಎಂ. ಪಿ. ಅಹ್ಮದ್ ಹೇಳಿದರು.