 |
|
ವಿಜಾಪುರದ ಹೋಟೆಲ್ ಎದುರು ಗುರುವಾರ ರಾತ್ರಿ ಊಟಕ್ಕಾಗಿ ಕಾಯುತ್ತಿದ್ದ ಯೋಧರು.
|
ವಿಜಾಪುರ: ಅತಿವೃಷ್ಟಿ, ಪ್ರವಾಹದಿಂದ ತೊಂದರೆಗೀಡಾದವರ ರಕ್ಷಣೆಗೆ ಬಂದಿದ್ದ ಯೋಧರೇ ಸಂತ್ರಸ್ತರಾಗಿ ಊಟಕ್ಕಾಗಿ ಮೂರು ದಿನ ಪರದಾಡಿದ ಘಟನೆ ಬೆಳಕಿಗೆ ಬಂದಿದೆ.
ಊಟ ನೀಡದೆ ಜಿಲ್ಲಾ ಆಡಳಿತ ಅಮಾನವೀಯತೆ ಮೆರೆದರೆ, ಮಾನವೀಯತೆ ಇರುವವರು ಅವರಿಗೆ ಮೂರು ದಿನ ಊಟಕೊಟ್ಟು ಜಿಲ್ಲೆಯ ಮಾನ ಕಾಪಾಡಿದ್ದಾರೆ.
ವಿಜಾಪುರ ಜಿಲ್ಲೆಯಲ್ಲಿ ಸುರಿದ ಮಳೆ ಹಾಗೂ ಪ್ರವಾಹದಿಂದ ಅಪಾರ ಸಾವು-ನೋವು ಸಂಭವಿಸಿತು. ರಕ್ಷಣಾ ಕಾರ್ಯಾಚರಣೆಗಾಗಿ ರಾಜ್ಯ ಸರಕಾರ ಸೇನೆಯ ಮೊರೆಹೊಕ್ಕಿತು. ‘ಭಾರತ-ಟಿಬೇಟಿಯನ್ ಸೀಮಾ ಸುರಕ್ಷಾ ದಳ’ದ 36 ಪರಿಣಿತ ಯೋಧರು ಪಂಜಾಬ್ದಿಂದ ಬೆಂಗಳೂರು ಮೂಲಕ ವಿಜಾಪುರಕ್ಕೆ ಅ.4ರಂದು ಧಾವಿಸಿದ್ದರು.
ಇವರೊಂದಿಗೆ ಹೈದರಾಬಾದ್, ಬೆಂಗಳೂರಿನಿಂದಲೂ ಸುಮಾರು 100ಕ್ಕೂ ಹೆಚ್ಚು ಜನ ಯೋಧರು ಬಂದಿದ್ದರು. ಇಂಡೋ-ಟಿಬೇಟಿಯನ್ ತಂಡದ ಯೋಧರಿಗೆ ಇಲ್ಲಿಯ ಬಾಗಲಕೋಟೆ ರಸ್ತೆಯಲ್ಲಿರುವ ನಗರಸಭೆ ಸಮುದಾಯ ಭವನದಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿತ್ತು.
‘ಇಲ್ಲಿ ಕೆಲಸ ಇಲ್ಲ. ನೀವು ಹೊರಟು ಬಿಡಿ’ ಎಂದು ಜಿಲ್ಲಾಧಿಕಾರಿಗಳು ಈ ತಂಡದ ಯೋಧರನ್ನು ಮರುದಿನವೇ ಸೇವೆಯಿಂದ ಬಿಡುಗಡೆ ಮಾಡಿದರು. ಆದರೆ, ತಮ್ಮ ಸೇನೆಯ ಮೇಲಾಧಿಕಾರಿಗಳನ್ನು ಸಂಪರ್ಕಿಸಿದರೆ ‘ಇದೇ 9ರವರೆಗೆ ನಿಮ್ಮನ್ನು ವಿಜಾಪುರಕ್ಕೆ ನಿಯೋಜಿಸಲಾಗಿದೆ. ಅಲ್ಲಿಯ ವರೆಗೆ ನೀವು ಅಲ್ಲಿಯೇ ಇರಬೇಕು’ ಎಂಬ ಕಟ್ಟಪ್ಪಣೆ ಬಂತು.
ಇದರಿಂದ ಇಕ್ಕಟ್ಟಿಗೆ ಸಿಲುಕಿದ ಈ ಯೋಧರಿಗೆ ವಾಪಸು ಹೋಗಲಾಗಲಿಲ್ಲ. ಸೇವೆಯಿಂದ ಬಿಡುಗಡೆ ಮಾಡಲಾಗಿದೆ ಎಂಬ ಕಾರಣ ನೀಡಿ ಜಿಲ್ಲಾ ಆಡಳಿತ ಅವರಿಗೆ ಊಟದ ವ್ಯವಸ್ಥೆಯನ್ನೂ ಮಾಡಲಿಲ್ಲ. ಹಣ ಇಲ್ಲದೆ ಇದ್ದ ಸ್ಥಿತಿಯಲ್ಲಿಯೇ ಹೊರಟು ಬಂದಿದ್ದ ಯೋಧರು ಸ್ವತಃ ಸಂತ್ರಸ್ತರಾದರು. ಊಟಕ್ಕೂ ಪರದಾಡಿದರು.
ಊಟಕ್ಕಾಗಿ ಪರದಾಡಿದ ಯೋಧರ ಸ್ಥಿತಿ ಕಂಡು ಕೆಲ ಮಾನವೀಯತೆ ಇರುವವರು ಒಂದೆರಡು ದಿನ ಖಾಸಗಿಯಾಗಿ ಊಟದ ವ್ಯವಸ್ಥೆ ಮಾಡಿದರು. ಗುರುವಾರದ ಹೊತ್ತಿಗೆ ಪರಿಸ್ಥಿತಿ ಹದಗೆಟ್ಟಿತು. ಹೋಟೆಲ್ ಎದುರು ನಿಂತಿದ್ದ ಯೋಧರ ಸ್ಥಿತಿ ಕಂಡು ಮರುಗಿದ ನಗರದ ಸಮಾಜ ಕಾರ್ಯಕರ್ತರೊಬ್ಬರು ಅವರಿಗೆ ಹೊಟ್ಟೆ ತುಂಬ ಊಟ ಮಾಡಿಸಿದರು.