ಮೈಸೂರು: ರೈತರು ಸಹಕಾರಿ ಸಂಸ್ಥೆಗಳ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಎಂದು ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಜಿ.ಟಿ.ದೇವೇಗೌಡ ಇಲ್ಲಿ ಭಾನುವಾರ ವಿಷಾದಿಸಿದರು.
ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ತಮ್ಮ ಬ್ಯಾಂಕ್ ಸಿಬ್ಬಂದಿಗೆ ಏರ್ಪಡಿಸಿದ್ದ ‘ಪ್ರೇರಣ ತರಬೇತಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೈತರಿಗೆ ಶೇ 3ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ಸಾಲ ಪಡೆದವರೇ ಸಾಲ ಸೌಲಭ್ಯ ಹೊಂದುತ್ತಿದ್ದಾರೆ. ಕೊಟ್ಟವರಿಗೆ ಸಾಲ ಕೊಡಲಾಗುತ್ತಿದೆ. ಹೊಸದಾಗಿ ರೈತರಿಗೆ ಸಾಲ ನೀಡುವ ಪ್ರಯತ್ನ ಮಾಡುತ್ತಿಲ್ಲ. ಬಹುತೇಕರು ಖಾಸಗಿಯಾಗಿ ಶೇ 5-10ರಷ್ಟು ಬಡ್ಡಿ ತೆತ್ತು ಸಾಲ ಪಡೆಯುತ್ತಿದ್ದಾರೆ. ಇಂತಹ ವ್ಯವಸ್ಥೆಯಿಂದಾಗಿ ರೈತರು ಸಹಕಾರಿ ಕ್ಷೇತ್ರದ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗಿದೆ ಎಂದರು.
ವಾಣಿಜ್ಯ ಬ್ಯಾಂಕುಗಳು ರೈತರಿಗೆ ಸಾಲ ಕೊಡುತ್ತಿಲ್ಲ. ಸಹಕಾರಿ ಸಂಸ್ಥೆಗಳಿಂದಲೂ ಸಾಲ ಸಿಗದಿದ್ದರೆ ಏನು ಮಾಡಬೇಕು ಎಂದು ಪ್ರಶ್ನಿಸಿದರು. ರೈತರ ಮೇಲೆ ಖಾಸಗಿಯವರ ಹಿಡಿತ ತಪ್ಪಿಸುವ ಸಲುವಾಗಿಯೇ ಸರ್ಕಾರ ಶೇ 3ರ ಬಡ್ಡಿ ದರದಲ್ಲಿ ಸಾಲ ಕೊಡುತ್ತಿದೆ. ಅದನ್ನೂ ಸರಿಯಾಗಿ ತಲುಪಿಸದಿದ್ದರೆ ಹೇಗೆ? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದ ಜನರು ಸಹಕಾರಿ ಸಂಸ್ಥೆಗಳಿಂದ ಹೆಚ್ಚು ಸಾಲ ಸೌಲಭ್ಯ ಪಡೆದಿದ್ದಾರೆ. ಇದರಿಂದಾಗಿ ಸಾಲ ಮನ್ನಾ ಸಂದರ್ಭದಲ್ಲಿ ಅಲ್ಲಿನ ಭಾಗಕ್ಕೆ ಒಂದೂವರೆ ಸಾವಿರ ಕೋಟಿಗೂ ಹೆಚ್ಚು ಅನುಕೂಲ ಸಿಕ್ಕಿದೆ. ಸಾಲ ವಸೂಲಿಯಲ್ಲೂ ಶೇ 90ಕ್ಕೂ ಹೆಚ್ಚು ಪ್ರಗತಿ ಸಾಧಿಸಿದ್ದಾರೆ. ಈ ಎಲ್ಲದರಿಂದ ಹೆಚ್ಚು ಅವಕಾಶ, ಸೌಲಭ್ಯ ಸಿಕ್ಕುವಂತಾಯಿತು. ಆದರೆ ಈ ಭಾಗದಲ್ಲೂ ಹೆಚ್ಚು ಜನರಿಗೆ ಸಾಲ ಕೊಟ್ಟಿದ್ದರೆ ಅನುಕೂಲ ಆಗು ತಿತ್ತು, ರೈತರು ಮುಂದೆ ಬರಲು ಸಾಧ್ಯವಾಗುತಿತ್ತು. ಜತೆಗೆ ಸಹಕಾರಿ ಸಂಸ್ಥೆಗಳ ಮೇಲೂ ಮತ್ತಷ್ಟು ವಿಶ್ವಾಸ ಬರುತಿತ್ತು ಎಂದು ವಿವರಿಸಿದರು.
ಅಧಿಕಾರಿಗಳು ಸೇರಿದಂತೆ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಆತ್ಮಾವಲೋಕನ ಮಾಡಿಕೊಂಡು, ಕಾರ್ಯದಕ್ಷತೆ ಬಗ್ಗೆ ಪರಾಮರ್ಶಿಸಿಕೊಳ್ಳಬೇಕಿದೆ. ಯಾವುದೇ ಸಹಕಾರಿ ಸಂಘ, ಸಂಸ್ಥೆ ಮುಚ್ಚಿದರೆ ಅದಕ್ಕೆ ಅಧಿಕಾರಿಗಳೇ ಕಾರಣರಾಗುತ್ತಾರೆ. ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸಿದರೆ ಯಾವುದೇ ಸಂಸ್ಥೆಯೂ ನಷ್ಟ ಹೊಂದುವುದಿಲ್ಲ, ಮುಚ್ಚುವುದಿಲ್ಲ. ಅಂತಹ ಆಗುಹೋಗುಗಳಿಗೆ ಅಧಿಕಾರಿಗಳೇ ಹೊಣೆಗಾರರು. ಒಮ್ಮೆ ಆತ್ಮ ವಿಮರ್ಶೆ ಮಾಡಿಕೊಂಡರೆ ರೈತರಿಗೆ ಕಿಂಚಿತ್ತಾದರೂ ಸಹಾಯ ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಸಿ.ಬಸವೇಗೌಡ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಸ್.ಸಿದ್ದೇಗೌಡ, ನಿರ್ದೇಶಕರಾದ ಪಿ.ನಾಗರಾಜ್, ಎಸ್.ರಾಮಕೃಷ್ಣೇಗೌಡ, ಜಿ.ಮಡಿವಾಳಪ್ಪ, ರಾಮೇಗೌಡ, ಕೆ.ಉಮಾಶಂಕರ್, ಆಂಜನೇಯ, ಬಿ.ವಿ.ಶೇಷಾದ್ರಿ, ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಸಿ.ಯತೀಶ್ಕುಮಾರ್, ಜನರಲ್ ಮ್ಯಾನೇಜರ್ ತಿಮ್ಮೇಗೌಡ, ಸಹಕಾರ ಸಂಘಗಳ ಸಹಾಯಕ ಉಪನಿಬಂಧಕರಾದ ಉಮೇಶ್, ಬಿ.ನಾಗರಾಜ್ ಇತರರು ಉಪಸ್ಥಿತರಿದ್ದರು.