ಬೆಂಗಳೂರು: ಗೆದ್ದರಷ್ಟೇ ಸಾಲದು, ಭಾರಿ ಅಂತರದಿಂದ ಜಯಿಸಬೇಕು. ಆದರೂ ಉಳಿದ ತಂಡಗಳ ಫಲಿತಾಂಶದ ಮೇಲೆ ಚಾಲೆಂಜರ್ಸ್ ಭವಿಷ್ಯ ಅವಲಂಬಿತವಾಗಿದೆ.
ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಸೂಪರ್ ಎಂಟರ ಹಂತದ ಪಂದ್ಯದಲ್ಲಿ ದೆಹಲಿ ಡೇರ್ಡೆವಿಲ್ಸ್ ಎದುರು ಆಡಲು ಶನಿವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಇಳಿಯಲಿರುವ ಬೆಂಗಳೂರು ತಂಡದ ಮುಂದೆ ದೊಡ್ಡ ಸವಾಲುಗಳೇ ಇವೆ.
ಸೂಪರ್ ಎಂಟರ ‘ಬಿ’ ಗುಂಪಿನಲ್ಲಿ ಈಗಾಗಲೇ ಚಾಲೆಂಜರ್ಸ್ ಎದುರು ಜಯಿಸಿರುವ ವಿಕ್ಟೋರಿಯಾ ಬುಶ್ರೇಂಜರ್ಸ್ ನಾಲ್ಕು ಪಾಯಿಂಟ್ ಹೊಂದಿದೆ. ಜೊತೆಗೆ ಸೆಮಿಫೈನಲ್ ತಲುಪುವ ಸಾಧ್ಯತೆ ಹೆಚ್ಚಿದೆ. ಅನಿಲ್ ಕುಂಬ್ಳೆ ಪಡೆ ನಾಲ್ಕರ ಘಟ್ಟ ಪ್ರವೇಶಿಸಬೇಕಾದರೆ ವಿಕ್ಟೋರಿಯಾ ತಂಡ ಕೇಪ್ ಕೋಬ್ರಾಸ್ ಎದುರು ಗೆಲ್ಲಬೇಕು. ಕೋಬ್ರಾಸ್ ತಂಡ ದೆಹಲಿ ವಿರುದ್ಧ ಸೋಲಬೇಕು. ಮುಖ್ಯವಾಗಿ ದೆಹಲಿ ವಿರುದ್ಧ ಅನಿಲ್ ಕುಂಬ್ಳೆ ಪಡೆ ಭಾರಿ ಅಂತರದಿಂದ ಗೆಲ್ಲಬೇಕು.
ಹಾಗಾಗಿ ಬೆಂಗಳೂರು ತಂಡ ಈಗ ಒತ್ತಡಕ್ಕೆ ಸಿಲುಕಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಈ ತಂಡದ ಅನುಭವಿ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಬೇಕಾಗಿದೆ. ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ತಿಲಕ್ರತ್ನೆ ದಿಲ್ಶಾನ್ ಅವರಂತಹ ಆಟಗಾರರನ್ನು ಹೊಂದಿರುವ ದೆಹಲಿ ಗೆಲುವಿನ ವಿಶ್ವಾಸದಲ್ಲಿದೆ.
ಶನಿವಾರ ಸಂಜೆ ನಾಲ್ಕು ಗಂಟೆಗೆ ನಡೆಯಲಿರುವ ಇನ್ನೊಂದು ಪಂದ್ಯದಲ್ಲಿ ವಿಕ್ಟೋರಿಯಾ ಹಾಗೂ ಕೋಬ್ರಾಸ್ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆದ್ದರೆ ಆಸ್ಟ್ರೇಲಿಯಾದ ವಿಕ್ಟೋರಿಯಾ ಸೆಮಿಫೈನಲ್ ತಲುಪುವುದು ಖಚಿತವಾಗಲಿದೆ.
ತಂಡಗಳು ಇಂತಿವೆ: ರಾಯಲ್ ಚಾಲೆಂಜರ್ಸ್: ಅನಿಲ್ ಕುಂಬ್ಳೆ (ನಾಯಕ), ಜಾಕ್ ಕಾಲಿಸ್, ರಾಬಿನ್ ಉತ್ತಪ್ಪ, ರಾಹುಲ್ ದ್ರಾವಿಡ್, ರಾಸ್ ಟೇಲರ್, ಮಾರ್ಕ್ ಬೌಷರ್, ಬಿ.ಅಖಿಲ್, ವಿರಾಟ್ ಕೊಹ್ಲಿ, ಆರ್.ವಿನಯ್ ಕುಮಾರ್, ಪ್ರವೀಣ್ ಕುಮಾರ್, ವಾನ್ ಡರ್ ಮೆರ್ವ್, ಡೇಲ್ ಸ್ಟೇಯ್ನಿ, ಭುವನೇಶ್ವರ್ ಕುಮಾರ್, ಮನೀಷ್ ಪಾಂಡೆ ಹಾಗೂ ರಾಜೇಶ್ ಬಿಷ್ಣೋಯಿ.
ದೆಹಲಿ ಡೇರ್ಡೆವಿಲ್ಸ್: ಗೌತಮ್ ಗಂಭೀರ್ (ನಾಯಕ), ವೀರೇಂದ್ರ ಸೆಹ್ವಾಗ್, ತಿಲಕರತ್ನೆ ದಿಲ್ಶಾನ್, ದಿನೇಶ್ ಕಾರ್ತಿಕ್, ಓವಾಯಿಸ್ ಷಾ, ಮನೋಜ್ ತಿವಾರಿ, ರಜತ್ ಭಟಿಯಾ, ಗ್ಲೆನ್ ಮೆಕ್ಗ್ರಾ, ಆಶೀಶ್ ನೆಹ್ರಾ, ಡಿರ್ಕ್ ನ್ಯಾನ್ಸ್, ಅಮಿತ್ ಮಿಶ್ರ, ಪ್ರದೀಪ್ ಸಂಗ್ವಾನ್ ಹಾಗೂ ಆವಿಷ್ಕಾರ್ ಸಾಳ್ವಿ.
ಪಂದ್ಯದ ಆರಂಭ: ರಾತ್ರಿ ಎಂಟು ಗಂಟೆಗೆ
ನೇರ ಪ್ರಸಾರ: ಸ್ಟಾರ್ ಕ್ರಿಕೆಟ್ (ಇಎಸ್ಪಿಎನ್-ಸ್ಟಾರ್ ಸ್ಪೋರ್ಟ್ಸ್)