ನವದೆಹಲಿ (ಪಿಟಿಐ): ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ನ್ಯಾಚುರಲ್ ರಿಸೋರ್ಸಸ್ ಲಿಮಿಟೆಡ್ಗೆ (ಆರ್ಎನ್ಆರ್ಎಲ್), ಪೂರ್ವ ನಿರ್ಧರಿತ ಬೆಲೆಗೆ ಕೃಷ್ಣಾ - ಗೋದಾವರಿ ನದಿಪಾತ್ರದ ‘ಡಿ6’ ಅನಿಲ ನಿಕ್ಷೇಪಗಳಿಂದ ಮುಖೇಶ್ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ (ಆರ್ಐಎಲ್), ನೈಸರ್ಗಿಕ ಅನಿಲ ಪೂರೈಸಲು ಹಿಂದೇಟು ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ.
ಕೌಟುಂಬಿಕ ಒಪ್ಪಂದದ ಅನ್ವಯ, ಪ್ರತಿ ದಿನ 28 ದಶಲಕ್ಷ ಯೂನಿಟ್ಗಳಷ್ಟು ನೈಸರ್ಗಿಕ ಅನಿಲವನ್ನು ಪ್ರತಿ ಯೂನಿಟ್ಗೆ 2.34 ಡಾಲರ್ ಬೆಲೆಯಲ್ಲಿ 17 ವರ್ಷಗಳ ಕಾಲ ಪೂರೈಸಬೇಕು ಎಂದು ಅನಿಲ್ ಬಣ ಪ್ರತಿಪಾದಿಸುತ್ತಿದೆ. ಕೇಂದ್ರ ಸರ್ಕಾರ ಅನುಮೋದಿಸಿರುವ ಪ್ರತಿ ದಶಲಕ್ಷ ಬ್ರಿಟಿಷ್ ಯೂನಿಟ್ಗೆ (ಎಂಎಂಬಿಟಿಯು) 4.20 ಡಾಲರ್ ದರದಲ್ಲಿ ಮಾತ್ರ ಅನಿಲ ಪೂರೈಸುವುದಾಗಿ ಮುಖೇಶ್ ಬಣ ಪಟ್ಟು ಹಿಡಿದಿದೆ.
ಬಾಂಬೆ ಹೈಕೋರ್ಟ್, ಅನಿಲ್ ಬಣದ ವಾದ ಎತ್ತಿ ಹಿಡಿದು ಜೂನ್ನಲ್ಲಿ ತೀರ್ಪು ನೀಡಿತ್ತು. ಇದನ್ನು ಮುಖೇಶ್ ಬಣವು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದೆ. ಈ ಸೋದರರ ಕಲಹದಲ್ಲಿ ತನಗೂ ಪಾತ್ರ ಇದೆ ಕೇಂದ್ರ ಸರ್ಕಾರವೂ ಹೇಳಿಕೊಂಡಿದೆ. ನೈಸರ್ಗಿಕ ಅನಿಲವು ಸರ್ಕಾರದ ಆಸ್ತಿಯಾಗಿದ್ದು, ಅದರ ಮೇಲಿನ ಸ್ವಾಮಿತ್ವವನ್ನು ಎರಡು ಪ್ರತಿಸ್ಪರ್ಧಿ ಉದ್ಯಮ ಸಂಸ್ಥೆಗಳು ಪ್ರತಿಪಾದಿಸುವಂತಿಲ್ಲ ಎಂಬುದು ಸರ್ಕಾರದ ಧೋರಣೆಯಾಗಿದೆ.
ಬಾಂಬೆ ಹೈಕೋರ್ಟ್ ತೀರ್ಪಿನಿಂದಾಗಿ ತನ್ನ ಕಾನೂನು ಹಕ್ಕುಗಳಿಗೆ ಧಕ್ಕೆ ಒದಗಿದೆ ಎಂದು ಕೇಂದ್ರ ಸರ್ಕಾರವು ಸೋಮವಾರ ಸುಪ್ರೀಂಕೋರ್ಟ್ನಲ್ಲಿ ಪ್ರಮಾಣಪತ್ರ ಸಲ್ಲಿಸಿದೆ.
ವಿಫಲ ಕದನ ವಿರಾಮ: ವಿವಾದವು ಸುಪ್ರೀಂಕೋರ್ಟ್ನಲ್ಲಿ ವಿಚಾರಣೆಗೆ ಬರುವ 10 ದಿನಗಳ ಮೊದಲು , ಅನಿಲ್ ಅಂಬಾನಿ, ಅಣ್ಣನ ಜತೆಗಿನ ಸಂಘರ್ಷ ಕೊನೆ ಹಾಡಲು ಬಯಸಿ ಕದನ ವಿರಾಮ ಘೋಷಿಸಿದ್ದರು. ತಮ್ಮಿಬ್ಬರ ಮಧ್ಯೆ ಇರುವ ವಿವಾದ ಬಗೆಹರಿಸಿಕೊಳ್ಳಲು ಈಗಲೂ ಕಾಲ ಮಿಂಚಿಲ್ಲ. ಅಣ್ಣನ ಜತೆ ಕುಳಿತು ಮಾತನಾಡಲು ತಾವು ಸಿದ್ಧ ಎಂದು ಅನಿಲ್ ಹೇಳಿಕೆ ನೀಡಿದ್ದರು.
ಅನಿಲ ಪೂರೈಕೆ ಮತ್ತು ಅದರ ಬೆಲೆಗೆ ಸಂಬಂಧಿಸಿದ ವಿವಾದ ಕೋರ್ಟ್ನಲ್ಲಿಯೇ ಇತ್ಯರ್ಥಗೊಳ್ಳಲಿ ಎಂದು ಮುಖೇಶ್ ಬಣ ಅಭಿಪ್ರಾಯಪಟ್ಟಿದೆ.
ಪ್ರತಿ ದಿನ ವಿಚಾರಣೆ: ಅಕ್ಟೋಬರ್ 20ರಿಂದ ಈ ವಿವಾದದ ವಿಚಾರಣೆಯನ್ನು ಪ್ರತಿ ದಿನ ನಡೆಸಲು ಸುಪ್ರೀಂಕೋರ್ಟ್ ನಿರ್ಧರಿಸಿದೆ.
ಮುಖ್ಯ ನ್ಯಾಯಮೂರ್ತಿ ಕೆ. ಜಿ. ಬಾಲಕೃಷ್ಣನ್ ಅವರ ನೇತೃತ್ವದಲ್ಲಿನ ಪೀಠವು ರಿಲಯನ್ಸ್ ಇಂಡಸ್ಟ್ರೀಸ್, ರಿಲಯನ್ಸ್ ನ್ಯಾಚುರಲ್, ಸರ್ಕಾರ ಮತ್ತು ಇತರ ಪ್ರತಿವಾದಿಗಳ ಅಹವಾಲು ಆಲಿಸಲಿದೆ.
ಆರ್ಐಎಲ್ ಪರ ಹರೀಶ್ ಸಾಳ್ವೆ, ಆರ್ಎನ್ಆರ್ಎಲ್ ಪರ ಮುಕುಲ್ ರೋಹ್ಟಗಿ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಮೋಹನ್ ಪರಾಸರನ್ ಅವರು ಸರ್ಕಾರದ ಪರ ವಕೀಲರ ನೇತೃತ್ವವಹಿಸಲಿದ್ದಾರೆ.