ನವದೆಹಲಿ: ಪ್ರತಿಭಾವಂತ ಆಟಗಾರ ರೋಹಿತ್ ಶರ್ಮ ಅವರು ಪ್ರವಾಸಿ ಶ್ರೀಲಂಕಾ ವಿರುದ್ಧ ನವೆಂಬರ್ 11ರಿಂದ 13ರವರೆಗೆ ಮುಂಬೈನಲ್ಲಿ ನಡೆಯಲಿರುವ ಅಭ್ಯಾಸ ಕ್ರಿಕೆಟ್ ಪಂದ್ಯದಲ್ಲಿ ಮಂಡಳಿ ಅಧ್ಯಕ್ಷರ ಇಲೆವೆನ್ ತಂಡವನ್ನು ಮುನ್ನಡೆಸಲಿದ್ದಾರೆ. ರಾಬಿನ್ ಉತ್ತಪ್ಪ ಕೂಡ ಸ್ಥಾನ ಪಡೆದಿದ್ದು ಉಪನಾಯಕರಾಗಿ ನೇಮಕವಾಗಿದ್ದಾರೆ.
ನಾಗ್ಪುರದ ಜಮ್ತಾ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದ ಬಳಿಕ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಕೆ.ಶ್ರೀಕಾಂತ್ ಹದಿನಾಲ್ಕು ಮಂದಿ ಆಟಗಾರರ ಪಟ್ಟಿಯನ್ನು ಪ್ರಕಟಿಸಿದರು.
ಭಾರತ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲು ನವೆಂಬರ್ 9ರಂದು ಮುಂಬೈಗೆ ಆಗಮಿಸಲಿರುವ ಲಂಕಾ ತಂಡ ಸಿಸಿಐ ಕ್ರೀಡಾಂಗಣದಲ್ಲಿ ಮೂರು ದಿನಗಳ ಪಂದ್ಯದಲ್ಲಿ ಆಡಲಿದೆ.
ತಂಡ ಇಂತಿದೆ: ರೋಹಿತ್ ಶರ್ಮ (ನಾಯಕ), ರಾಬಿನ್ ಉತ್ತಪ್ಪ (ಉಪನಾಯಕ), ಅಭಿನವ್ ಮುಕುಂದ್, ಆಜಿಂಕ್ಯಾ ರಹಾನೆ, ಮನೋಜ್ ತಿವಾರಿ, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಪಿಯೂಷ್ ಚಾವ್ಲಾ, ಪ್ರಗ್ಯಾನ್ ಓಜಾ, ಪ್ರದೀಪ್ ಸಂಗ್ವಾನ್, ಧವಳ್ ಕುಲಕರ್ಣಿ, ಅಶೋಕ್ ದಿಂಡಾ, ಪಂಕಜ್ ಸಿಂಗ್, ಅಭಿಷೇಕ್ ನಾಯರ್ ಹಾಗೂ ಇಶಾಂಕ್ ಜಗ್ಗಿ.