ನವದೆಹಲಿ (ಪಿಟಿಐ): ನೈಸರ್ಗಿಕ ಅನಿಲ ಪೂರೈಕೆಗೆ ಸಂಬಂಧಿಸಿದಂತೆ, ಮುಖೇಶ್ ಅಂಬಾನಿ ಒಡೆತನದ ‘ಆರ್ಐಎಲ್’ ಜತೆಗಿನ ಒಪ್ಪಂದ ಜಾರಿಯಲ್ಲಿ ಕೇಂದ್ರ ಸರ್ಕಾರಕ್ಕೆ ಯಾವುದೇ ಪಾತ್ರ ಇಲ್ಲ ಎಂದು ಅನಿಲ್ ಒಡೆತನದ ‘ಆರ್ಎನ್ಆರ್ಎಲ್’, ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಅನಿಲದ ಬಳಕೆ ಮತ್ತು ಬೆಲೆ ನಿಗದಿಯಲ್ಲಿ ಸರ್ಕಾರಕ್ಕೆ ಯಾವುದೇ ಪಾತ್ರ ಇಲ್ಲ. ದೇಶದಲ್ಲಿ ಅನಿಲ ಮಾರಾಟ ಮಾಡಲು ‘ಆರ್ಐಎಲ್’ ಸಂಪೂರ್ಣ ಸ್ವಾತಂತ್ರ್ಯ ಹೊಂದಿದೆ. ತನಗೆ ಅನಿಲ ಮಾರಾಟ ಮಾಡಲು ಸರ್ಕಾರದ ಅನುಮತಿ ಬೇಕಾಗಿಲ್ಲ. ನೈಸರ್ಗಿಕ ಅನಿಲದ ಮೇಲಿನ ಸರ್ಕಾರದ ಮಾಲೀಕತ್ವವನ್ನು ಆರ್ಎನ್ಆರ್ಎಲ್ ಯಾವತ್ತೂ ಪ್ರಶ್ನಿಸಿಲ್ಲ ಎಂದು ಕೋರ್ಟ್ಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.
ಕೌಟುಂಬಿಕ ಒಪ್ಪಂದಕ್ಕೆ ಸಂಬಂಧಿಸಿದಂತೆ ‘ಆರ್ಐಎಲ್’ ಹಲವಾರು ಸಂದರ್ಭಗಳಲ್ಲಿ ತನ್ನ ಧೋರಣೆ ಬದಲಿಸಿದೆ. ಬೇರೆ ಬೇರೆ ಸಂದರ್ಭಗಳಲ್ಲಿ ವ್ಯಕ್ತವಾದ ಬದಲಾದ ಈ ಧೋರಣೆಯು ‘ಆರ್ಐಎಲ್’ ಸುಳ್ಳು ಹೇಳುತ್ತಿರುವುದನ್ನು ಸಾಬೀತುಪಡಿಸುತ್ತಿದೆ ಎಂದು ಕೋರ್ಟ್ಗೆ ತಿಳಿಸಲಾಗಿದೆ.
ಪ್ರತಿ ದಿನ 28 ದಶಲಕ್ಷ ಘನ ಮೀಟರ್ಗಳಷ್ಟು ಅನಿಲವನ್ನು , ಪ್ರತಿ ದಶಲಕ್ಷ ಬ್ರಿಟಿಷ್ ಥರ್ಮಲ್ ಯುನಿಟ್ಗೆ 2.34 ಡಾಲರ್ನಂತೆ ‘ಆರ್ಎನ್ಆರ್ಎಲ್’ಗೆ ಪೂರೈಸಬೇಕೆಂದು ಬಾಂಬೆ ಹೈಕೋರ್ಟ್ ಜೂನ್ 15ರಂದು ‘ಆರ್ಐಎಲ್’ಗೆ ಆದೇಶಿಸಿದೆ. ಈ ಸಂಬಂಧ ಒಂದು ತಿಂಗಳಲ್ಲಿ ಒಪ್ಪಂದಕ್ಕೆ ಬರಬೇಕು ಎಂದೂ ಸೂಚಿಸಿತ್ತು.
ಈ ತೀರ್ಪಿನ ವಿರುದ್ಧ ಎರಡೂ ಸಂಸ್ಥೆಗಳು ಬೇರೆ ಬೇರೆ ನೆಲೆಗಳಲ್ಲಿ ಸುಪ್ರೀಂಕೋರ್ಟ್ಗೆ ಮೊರೆ ಹೋಗಿವೆ. ತಾನು, ಕೃಷ್ಣಾ ಗೋದಾವರಿ ನದಿ ಪಾತ್ರದ ‘ಡಿ6’ ಅನಿಲ ಸ್ಥಾವರದ ಕೇವಲ ಗುತ್ತಿಗೆ ಸಂಸ್ಥೆಯಾಗಿದ್ದು, ಅನಿಲ ಪೂರೈಕೆಯ ಬೆಲೆ ನಿಗದಿ ಮಾಡುವ ಅಧಿಕಾರ ತನಗೆ ಇಲ್ಲ ಎಂದು ‘ಆರ್ಐಎಲ್’ ನಿಲುವು ತಳೆದಿದೆ.
ಇನ್ನೊಂದೆಡೆ ಕೇಂದ್ರ ಸರ್ಕಾರವೂ ಕೋರ್ಟ್ನಲ್ಲಿ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದು, ನೈಸರ್ಗಿಕ ಅನಿಲ ಹಂಚಿಕೆ ಮತ್ತು ಬೆಲೆ ನಿಗದಿಯಲ್ಲಿ ತನಗೆ ಸಂಪೂರ್ಣ ಹಕ್ಕು ಇದೆ ಎಂದು ತಿಳಿಸಿದೆ. ಈ ವಿವಾದದ ವಿಚಾರಣೆ ಅಕ್ಟೋಬರ್ 20ಕ್ಕೆ ನಿಗದಿಯಾಗಿದೆ.