ಉಡುಪಿ: ಧಾರ್ಮಿಕ ಪರಂಪರೆಯ ಕೇಂದ್ರವಾದ ಉಡುಪಿಯಲ್ಲಿ ಆಧುನಿಕ ಶಿಕ್ಷಣದ ಕನಸು ಕಂಡ ಸ್ವಾಮೀಜಿ ಎಂಬುದಾಗಿ ಮಂಗಳವಾರ ವೃಂದಾವನಸ್ಥರಾದ ಅದಮಾರು ಮಠದ ವಿಬುಧೇಶತೀರ್ಥ ಸ್ವಾಮೀಜಿಯವರನ್ನು ಬಲ್ಲವರು ಗುರುತಿಸುತ್ತಾರೆ.
ಸ್ವಾಮೀಜಿ ನಿಧನದೊಂದಿಗೆ ಅಷ್ಟಮಠಗಳ ಹಿರಿಯ ಕೊಂಡಿಯೊಂದು ಕಳಚಿದೆ. ಧಾರ್ಮಿಕ ಕೆಲಸ ಕಾರ್ಯಗಳೊಂದಿಗೆ ಪೂರ್ಣ ಪ್ರಜ್ಞ ಶಿಕ್ಷಣ ಸಂಸ್ಥೆಗಳ ಸ್ಥಾಪಕರಾದ ಸ್ವಾಮೀಜಿ ತಾವು ಕಟ್ಟಿಬೆಳೆಸಿದ ಎಲ್ಲ ವಿದ್ಯಾಸಂಸ್ಥೆಗಳಿಗೆ ‘ಪೂರ್ಣಪ್ರಜ್ಞ’ ವಿದ್ಯಾಸಂಸ್ಥೆಗಳೆಂದೇ ನಾಮಕರಣ ಮಾಡಿದ್ದರು. ಉಡುಪಿಯನ್ನು ದಾಟಿ ರಾಜ್ಯದಾದ್ಯಂತ ಪ್ರಾಥಮಿಕ ಶಿಕ್ಷಣದಿಂದ ಕಾಲೇಜು ಶಿಕ್ಷಣದವರೆಗೆ ವಿವಿಧ ಶಾಲೆ-ಕಾಲೇಜು ಸ್ಥಾಪಿಸಿದ್ದರು. ದೇಶದಾದ್ಯಂತ ಅವರ ಸುಮಾರು 27 ವಿದ್ಯಾಸಂಸ್ಥೆಗಳಿವೆ.
ಪೂರ್ವಾಶ್ರಮದ ಹೆಸರು ರಮೇಶ್: ದ.ಕ. ಜಿಲ್ಲೆಯ ಮೂಲ್ಕಿಯ ಪಾವಂಜೆ ಗ್ರಾಮದಲ್ಲಿ ಜನಿಸಿದ ಸ್ವಾಮೀಜಿಯವರ ಪೂರ್ವಾಶ್ರಮದ ಹೆಸರು ರಮೇಶ್. ತಂದೆ ಬೋಜರಾಜಯ್ಯ ತಾಯಿ ನಾಗವೇಣಮ್ಮ. ‘ಕ್ವಿಟ್ ಇಂಡಿಯಾ ಚಳವಳಿ’ ಸಂದರ್ಭದಲ್ಲಿ ಸಾರ್ವಜನಿಕ ಭಾಷಣ ನಡೆಯುತ್ತಿದ್ದ ಸಂದರ್ಭದಲ್ಲಿ ಥಟ್ಟನೆ ವೇದಿಕೆಯೇರಿ ಬ್ರಿಟಿಷರ ವಿರುದ್ಧ ಭಾಷಣ ಮಾಡಿದ್ದು ಈ ‘ರಮೇಶ್’ನ ಹೆಗ್ಗಳಿಕೆ.
ಆಗಿನ ಕಾಲದಲ್ಲಿ ಉಡುಪಿಗೆ ಬಂದು ಬೋರ್ಡ್ ಹೈಸ್ಕೂಲ್ನಲ್ಲಿ ಎಸ್ಸೆಸ್ಸೆಲ್ಸಿ ಓದಿ್ದದರು. ಆ ಸಂದರ್ಭದಲ್ಲಿ ವಿಬುಧಮಾನ್ಯ ತೀರ್ಥರು ನಿಧನರಾದ ಕಾರಣ, ಪಲಿಮಾರು ಮಠದ ಸ್ವಾಮೀಜಿಗಳು ಈ ಪೀಠದ ಉತ್ತರಾಧಿಕಾರಿ ಶೋಧನೆ ನಡೆಸಿದಾಗ ಈ ಚುರುಕು ಬಾಲಕನ ವ್ಯಕಿತ್ವದಿಂದ ಆಕರ್ಷಿತರಾದರು. ಹೀಗಾಗಿ ತಮ್ಮ 17ನೇ ವಯಸ್ಸಿನಲ್ಲಿ ಸನ್ಯಾಸದೀಕ್ಷೆ ಪಡೆದು, ‘ವಿಬುಧೇಶತೀರ್ಥ’ ಎಂಬ ಹೆಸರಿನಿಂದ ನರಸಿಂಹ ತೀರ್ಥ ಸಂಸ್ಥಾನದ 31ನೇ ಪೀಠಾಧಿಪತಿಗಳಾಗಿ ನೇಮಕಗೊಂಡರು.
ವಿದೇಶ ಪ್ರಯಾಣ ಮಾಡಿದ್ದ ಸ್ವಾಮೀಜಿ, ತಮ್ಮ ಮೂರನೆಯ ಪರ್ಯಾಯದಲ್ಲಿ ತಮ್ಮ ಶಿಷ್ಯನಿಗೆ ಕೃಷ್ಣನ ಪೂಜೆಯನ್ನು ಮಾಡುವ ಅವಕಾಶ ನೀಡಿದ್ದರು. ನೇರ, ಗಡಸು ಮಾತಿನ ಸ್ವಾಮೀಜಿ ದಿಟ್ಟ ನಿಲುವಿನವರು ಎಂದು ಅವರನ್ನು ಸ್ಮರಿಸಿಕೊಳ್ಳಲಾಗುತ್ತದೆ.
ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಅದಮಾರು ಮಠದ ಪರ್ಯಾಯ ಸ್ವಾಮೀಜಿಗಳಾದ ವಿಬುಧೇಶ ತೀರ್ಥರು ತಮ್ಮ ಮೊದಲ ಪರ್ಯಾಯ ಕಾಲ 1956ರಲ್ಲಿ ವೇದಪಾಠ ಶಾಲೆಯನ್ನು ಪ್ರಾರಂಭಿಸಿದ್ದರು. ಅಷ್ಟೇ ಅಲ್ಲ ತಮ್ಮ ಪರ್ಯಾಯ ಕಾಲದಲ್ಲಿ ರಥಬೀದಿಗೆ ಕಾಂಕ್ರೀಟ್ ಹಾಕಿಸಿದ್ದರು. ಬೆಳ್ಳಿಯ ರಥದಲ್ಲಿ ಕೃಷ್ಣನ ಉತ್ಸವ ಪ್ರಾರಂಭಿಸಿದ್ದರು.
ಉಡುಪಿ ಕೃಷ್ಣಮಠದಲ್ಲಿ ಸುಸಜ್ಜಿತ ಭೋಜನ ಶಾಲೆ, ಅದಮಾರು ಗೆಸ್ಟ್ಹೌಸ್, ರಥಬೀದಿಯ ಶೌಚಾಲಯ ನಿರ್ಮಾಣ ಸೇರಿದಂತೆ ಕೃಷ್ಣಮಠಕ್ಕಾಗಿ ಅಪಾರ ಸೇವೆ ಸಲ್ಲಿಸಿ್ದದರು ಎಂದು ಅಷ್ಟಮಠಗಳ ಸ್ವಾಮೀಜಿಗಳು ಸ್ಮರಿಸಿಕೊಳ್ಳುತ್ತಾರೆ. ಅಲ್ಲದೇ ಬೆಂಗಳೂರು ಸಮೀಪ ಬಡತನ ಹಾಗೂ ಸೌಲಭ್ಯವಂಚಿತ ಬರಪೀಡಿತ ಕೆಲವು ಪ್ರದೇಶಗಳಿಗೆ ಭೇಟಿ ನೀಡಿ 52 ಮನೆಗಳನ್ನು ಕಟ್ಟಿಸಿಕೊಟ್ಟಿದ್ದು ಕೂಡ ಸ್ವಾಮೀಜಿಯವರ ಸಾಧನೆ ಎಂದು ಹೇಳಲಾಗುತ್ತಿದೆ.
ಶಿಕ್ಷಣ ಸಂಸ್ಥೆಗಳ ಜನಕ, ವಿಜ್ಞಾನ ಪ್ರಿಯ:
ರಾಜ್ಯದ ಒಳಗೆ ಮತ್ತು ಹೊರಗೆ ಅದಮಾರು ಮಠ ಎಜ್ಯುಕೇಷನಲ್ ಕೌನ್ಸಿಲ್ ವತಿಯಿಂದ ಹಲವು ವಿದ್ಯಾಸಂಸ್ಥೆಗಳನ್ನು ಕಟ್ಟಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ನೆರವಾಗಿ್ದದಾರೆ. ಅವರಿಗೆ ಇಂಗ್ಲಿಷ್ ಹಾಗೂ ವಿಜ್ಞಾನದ ಮೇಲೆ ಅಪಾರ ಆಸಕ್ತಿ. ಹೀಗಾಗಿ ಬೆಂಗಳೂರಿನಲ್ಲಿ ದೇವನಹಳ್ಳಿ ಸಮೀಪ ಬಿದಲೂರಿನಲ್ಲಿ ‘ಪೂರ್ಣಪ್ರಜ್ಞ ವೈಜ್ಞಾನಿಕ ಸಂಶೋಧನಾ ಕೇಂದ್ರ’ವನ್ನು ಸ್ಥಾಪಿಸಿದ್ದರು. ಅಷ್ಟಮಠಗಳಲ್ಲಿ ಇಂಗ್ಲಿಷ್ ಬಲ್ಲ, ಮಾತನಾಡಬಲ್ಲ ಪ್ರಥಮ ಪೀಠಾಧಿಪತಿಯಾಗಿದ್ದ ಇವರನ್ನು ಇತರಸ್ವಾಮೀಜಿಗಳು ತಮಾಷೆಗಾಗಿ ‘ವಿಬುಧೇಶತೀರ್ಥ ಶ್ರೀ ಫಾದರ್’ ಎಂದು ಕರೆಯುತ್ತಿದ್ದರಂತೆ !!
ಅವರ ರಾಜಕೀಯ ನಿಲುವುಗಳು ವಿವಾದಕ್ಕೆ ಕಾರಣವಾಗಿದ್ದವು. ಕೆಲ ವರ್ಷಗಳ ಹಿಂದೆ ಸೋನಿಯಾಗಾಂಧಿ ಪ್ರಧಾನಿಯಾಗುವ ಗಾಳಿಸುದ್ದಿ ಹಬ್ಬಿದಾಗ, ವಿದೇಶಿ ಮೂಲದ ಬಗ್ಗೆ ಬಹಳ ಚರ್ಚೆಯಾಗುತ್ತಿದ್ದ ವೇಳೆ, ಸ್ವಾಮೀಜಿ ಕೂಡ ಒಂದು ಹೇಳಿಕೆ ನೀಡಿ, ‘ಸೋನಿಯಾ ವಿದೇಶಿ ಮಹಿಳೆ. ಆಕೆ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ’ ಎನ್ನುವ ಮಾತು ಹೇಳಿ ಎಲ್ಲರ ಗಮನ ಸೆಳೆದಿದ್ದರು. ಮಹಿಳೆಯರಿಗೆ ಸಂಸತ್ತಿನಲ್ಲಿ ಶೇ 50ರಷ್ಟು ಮೀಸಲಾತಿ ಬೇಕು ಎನ್ನುವುದು ಅವರ ಪ್ರಗತಿಪರ ನಿಲುವಾಗಿತ್ತು.
ಅಭಿನಂದನಾ ಗ್ರಂಥ ಸಮರ್ಪಣೆ:
ಸಮಾಜ, ಶಿಕ್ಷಣ ಸೇವೆ, ಧಾರ್ಮಿಕ ಕೆಲಸಗಳೊಂದಿಗೆ ಗುರುತಿಸಿಕೊಡಿದ್ದ ವಿಬುಧೇಶ ತೀರ್ಥರಿಗೆ ಕಳೆದ ತಿಂಗಳು ಉಡುಪಿಯಲ್ಲಿ ಅವರ ಅಭಿಮಾನಿಗಳು, ಶಿಷ್ಯರು, ಭಕ್ತರು ‘ಅಭಿನಂದನಾ ಗ್ರಂಥ’ ಸಮರ್ಪಿಸಿದ್ದರು.