 |
|
ನಾಡಹಬ್ಬ ದಸರೆಯ ಅಂಗವಾಗಿ ಮೈಸೂರಿನ ಅರಮನೆ ಉತ್ತರದ್ವಾರದ ಕೋಟೆ ಆಂಜನೇಯ ದೇವಸ್ಥಾನ ಮುಂಭಾಗ ಭಾನುವಾರ ನಡೆದ ಯೋಗ ದಸರಾ ಕಾರ್ಯಕ್ರಮದಲ್ಲಿ ಯೋಗಪಟುಗಳು ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು. ಸಚಿವೆ ಶೋಭಾ ಕರಂದ್ಲಾಜೆ, ಮೇಯರ್ ಪುರುಷೋತ್ತಮ್ ಇದ್ದಾರೆ.
|
ಮೈಸೂರು: ಸೂರ್ಯ ಎಂದಿನಂತೆ ಭಾನುವಾರವೂ ಸಹ ಚಾಮುಂಡಿ ಬೆಟ್ಟದ ತುದಿಯಿಂದ ಆಕಳಿಸಿಕೊಂಡು ಎದ್ದು, ಅರಮನೆ ಕಡೆಗೆ ದೃಷ್ಟಿ ಹಾಯಿಸಿದ ತಕ್ಷಣ ಸ್ವಲ್ಪ ಗಲಿಬಿಲಿಗೊಂಡಂತೆ ಕಂಡ. ಅಬಾಲವೃದ್ಧರಾಗಿ ಮುನ್ನೂರಕ್ಕೂ ಅಧಿಕ ಜನ ಏಕಕಾಲಕ್ಕೆ ತನಗೆ ನಮಸ್ಕಾರ ಮಾಡುತ್ತಿರುವುದನ್ನು ನೋಡಿ ಆಶ್ಚರ್ಯಚಕಿತನಾದ !.
ನಾಡಹಬ್ಬ ದಸರೆಯ ಅಂಗವಾಗಿ ಮೈಸೂರಿನ ಅರಮನೆ ಉತ್ತರದ್ವಾರದ ಕೋಟೆ ಆಂಜನೇಯ ದೇವಸ್ಥಾನ ಮುಂಭಾಗ ಭಾನುವಾರ ಯೋಗ ದಸರಾ ಉದ್ಘಾಟನೆಯ ಸಮಯದಲ್ಲಿ ನೂರಾರು ಜನರು ಸಾಮೂಹಿಕ ಸೂರ್ಯ ನಮಸ್ಕಾರ ಮಾಡಿ ‘ಯೋಗ ಮಾಡಿ ಆರೋಗ್ಯವಾಗಿರಿ’ ಎನ್ನುವ ಸಂದೇಶವನ್ನು ದಸರೆಗೆ ಬಂದ ಜನತೆಗೆ ನೀಡಿದರು.
ಸಾಮೂಹಿಕ ಸೂರ್ಯ ನಮಸ್ಕಾರ ಮುಗಿದ ನಂತರ ಏಳೆಂಟು ಮಂದಿ ಯೋಗ ವಿದ್ಯಾರ್ಥಿಗಳು ವೇದಿಕೆಯ ಮೇಲೆ ಕ್ರಿಯಾಯೋಗ, ಗಂಡಭೇರುಂಡಾಸನ, ಕೌಂಡಿನ್ಯ ಆಸನ, ವೃಶ್ಚಿಕ ಆಸನ, ಕುಕ್ಕಟ ಆಸನ, ಚಕ್ರಾ ಸಾನ ಮುಂತಾದ ಆಸನಗಳನ್ನು ಮಾಡಿ ಯೋಗ ದಸರಾಕ್ಕೆ ಅರ್ಥಪೂರ್ಣ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಭಾರತೀಯ ಯೋಗ ಮತ್ತು ಸಂಸ್ಕೃತಿ ವಿದೇಶಿಯರನ್ನು ಆರ್ಕಷಣೆ ಮಾಡುತ್ತಿದೆ. ನಾವು ಮರೆಯುತ್ತಿದ್ದೇವೆ.
ವಿದೇಶಿಯರು ನಮ್ಮಿಂದ ಕಲಿತು ಅವರ ದೇಶದಲ್ಲಿ ಪ್ರಚಾರ ಪಡಿಸುತ್ತಿದ್ದಾರೆ. ಆದರೆ ನಮ್ಮಲ್ಲಿ ಯೋಗವೆಂದರೆ ಯಾರು ಅಷ್ಟಾಗಿ ಗಮನ ಹರಿಸುತ್ತಿಲ್ಲ ಎಂದು ವಿಷಾದಿಸಿದರು.
ದೇಶದ ಪ್ರಾಚೀನ ಕಲೆಯಾದ ಯೋಗವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವಾಗಬೇಕಾಗಿದೆ. ಗ್ರಾಮೀಣ ಕ್ರೀಡೆಗಳನ್ನು ಉಳಿಸಬೇಕಾಗಿದೆ ಎಂದರು.
ಮೇಯರ್ ಪುರುಷೋತ್ತಮ್, ಉಪಮೇಯರ್ ಶಾರದಮ್ಮ, ದಸರಾ ಉಪಸಮಿತಿ ಅಧ್ಯಕ್ಷ ಡಾ.ಎ.ಎಸ್.ಚಂದ್ರಶೇಖರ್, ಉಪಾಧ್ಯಕ್ಷರಾದ ಡಾ.ಕೆ. ರಾಘವೇಂದ್ರ ಆರ್.ಪೈ, ಜಿ.ನಂಜುಂಡಸ್ವಾಮಿ, ಪತಂಜಲಿ ಯೋಗ ಶಿಕ್ಷಣ ಸಮಿತಿ ಪ್ರಧಾನ ಸಂಚಾಲಕ ಅ.ರಾ.ರಾಮಸ್ವಾಮಿ, ಸದಸ್ಯ ಡಿ.ಬಿ.ಜೋಶಿ, ಸಹ ಸದಸ್ಯ ಕಾರ್ಯದರ್ಶಿ ಪುಟ್ಟೇಗೌಡ ಹಾಜರಿದ್ದರು.