 |
|
ಹೊಸಗುಂದದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಉಮಾಮಹೇಶ್ವರ ದೇವಾಲಯ.
|
ಸಾಗರ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಹೊಸಗುಂದ ಕ್ಷೇತ್ರ ಈಗ ಹೆಚ್ಚು ಪ್ರಚಾರ ಪಡೆಯುತ್ತಿದೆ. ಸಮೃದ್ಧ ಅರಣ್ಯ ಹಾಗೂ ಸುಂದರ ಪರಿಸರದ ನಡುವೆ ಇರುವ ಉಮಾಮಹೇಶ್ವರ ದೇವಾಲಯ ವೀಕ್ಷಣೆಗೆ ಕಾಂಗ್ರೆಸ್ನ ವರಿಷ್ಠ ನಾಯಕ ರಾಹುಲ್ಗಾಂಧಿ ಆಗಮಿಸಲಿದ್ದಾರೆ ಎನ್ನುವ ಕಾರಣಕ್ಕೆ ಹೆಚ್ಚು ಸುದ್ದಿಯಲ್ಲಿದೆ.
ಸಾಗರದಿಂದ ಶಿವಮೊಗ್ಗಕ್ಕೆ ಹೋಗುವ ಮಾರ್ಗದಲ್ಲಿ ಆನಂದಪುರಂ ಸಮೀಪ ಇರುವ ಹೊಸಗುಂದದ ದೇವಾಲಯವನ್ನು ಇತ್ತೀಚಿನ ವರ್ಷಗಳಲ್ಲಿ ಸಿ.ಎಂ.ಎಂ.ಶಾಸ್ತ್ರಿ ನೇತೃತ್ವದ ಉಮಾಮಹೇಶ್ವರ ಟ್ರಸ್ಟ್ ವತಿಯಿಂದ ಜೀರ್ಣೋದ್ಧಾರ ಮಾಡಲಾಗುತ್ತಿದೆ.
ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವ ಜೊತೆಗೆ ಸುತ್ತಮುತ್ತಲ ಪರಿಸರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಿವಿಧ ಪರಿಸರ ಸಂಬಂಧಿ ಚಟುವಟಿಕೆಗಳನ್ನು ಸಹ ಇಲ್ಲಿ ನಡೆಸಲಾಗುತ್ತಿದೆ. ಮಳೆ ನೀರು ಸಂಗ್ರಹ, ನೀರು ಇಂಗಿಸುವುದು, ಸಾವಯವ ಕೃಷಿ ಇವೇ ಮೊದಲಾದ ಚಟುವಟಿಕೆಗಳ ಮೂಲಕ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಪರಿಸರವಾದಿ ಸುರೇಶ್ ಹೆಬ್ಳೀಕರ್, ಶ್ರೀಪಡ್ರೆ ಈಗಾಗಲೆ ಇಲ್ಲಿಗೆ ಆಗಮಿಸಿ ಪರಿಸರ ಜಾಗೃತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.
ಕಳೆದ ತಿಂಗಳು ಹೊಸಗುಂದ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಾಹುಲ್ಗಾಂಧಿ ಅವರಿಗೆ ಆಪ್ತರಾಗಿರುವ ಬ್ರಿಜೇಶ್ಮಿಶ್ರ ಎಂಬುವವರು ಇಲ್ಲಿನ ಪರಿಸರವನ್ನು ನೋಡಿ ಆಕರ್ಷಿತರಾಗಿದ್ದರು.
ಈ ಹಿನ್ನೆಲೆಯಲ್ಲಿ ರಾಹುಲ್ಗಾಂಧಿ ಅವರಿಗೆ ವಿಷಯ ತಿಳಿಸಿದ್ದು ಅವರು ಇಲ್ಲಿಗೆ ಬರಲು ಸಮ್ಮತಿಸಿದ್ದಾರೆ ಎನ್ನಲಾಗಿದೆ.
ಹೊಸಗುಂದದ ದೇವಾಲಯದ ಸುತ್ತಮುತ್ತಲು ಇರುವ ಕಾಡನ್ನು ದೇವರಕಾಡು ಎಂದು ಘೋಷಿಸಬೇಕೆಂದು ಹಲವು ವರ್ಷಗಳಿಂದ ಒತ್ತಾಯಿಸಲಾಗುತ್ತಿದೆ.
ರಾಹುಲ್ಗಾಂಧಿ ಆಗಮನದಿಂದ ಈ ಬೇಡಿಕೆ ಈಡೇರುವ ಜೊತೆಗೆ ಈ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ನೆರವು ದೊರಕಬಹುದು ಎಂದು ನಿರೀಕ್ಷಿಸಲಾಗಿದೆ.