ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿಯವರ ಇತ್ತೀಚಿನ ವಿವಾದಿತ ಹೇಳಿಕೆಗಳು ಕೇಂದ್ರದ ನಾಯಕರಲ್ಲಿ ಇರಿಸುಮುರಿಸು ಉಂಟು ಮಾಡಿವೆ. ಕಳೆದ ಕೆಲವು ದಿನಗಳಿಂದ ನಿರಂತರ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿರುವ ಅವರು, ಎನ್ಡಿಎ ನೇತೃತ್ವದ ಸರ್ಕಾರವನ್ನು ಮುಜುಗರಕ್ಕೆ ಈಡು ಮಾಡಿದ್ದಾರೆ. ಇಂತಹ ವಿವಾದಿತ ಹೇಳಿಕೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲೂ ಸ್ವಾಮಿ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ರಘುರಾಂ ರಾಜನ್, ಅರುಣ್ ಜೇಟ್ಲಿ ಸೇರಿದಂತೆ ಇತರ ಪ್ರಮುಖರನ್ನು ಅವರು ಪರೋಕ್ಷವಾಗಿ ಟೀಕಿಸಿದ್ದಾರೆ. ಇದೀಗ, ‘ವ್ಯಕ್ತಿ ಯಾವ ಪಕ್ಷಕ್ಕೆ ಸೇರಿದ್ದರೂ ಇಂಥ ಹೇಳಿಕೆಗಳು ಒಳ್ಳೆಯವಲ್ಲ, ಪ್ರಚಾರದ ಉದ್ದೇಶಕ್ಕಾಗಿ ಮಾತನಾಡುವುದರಿಂದ ದೇಶಕ್ಕೇನೂ ಒಳಿತಾಗದು’ ಎಂದು ಪ್ರಧಾನಿ ಮೋದಿ ಅವರು ಪರೋಕ್ಷವಾಗಿ ಸ್ವಾಮಿ ಅವರಿಗೆ ತಾಕೀತು ಮಾಡಿರುವುದು ಉತ್ತಮ ಬೆಳವಣಿಗೆ. ವಾಕ್ ಸ್ವಾತಂತ್ರ್ಯವಿದೆ ಎಂದಮಾತ್ರಕ್ಕೆ ಇತರರ ಘನತೆಗೆ ಧಕ್ಕೆ ಬರುವ ರೀತಿಯಲ್ಲಿ ಮಾತನಾಡುವುದು ಸರಿಯೇ? ಆಕ್ಷೇಪಾರ್ಹ ಹೇಳಿಕೆಗಳಿಗೆ ಅಂಕುಶ ಹಾಕಲೇಬೇಕಾಗುತ್ತದೆ.