ಅಂಕೋಲಾ (ಉತ್ತರ ಕನ್ನಡ): ಕಲ್ಯಾಣ ಮಂಟಪದಲ್ಲಿ ಇನ್ನೇನು ಮದುವೆ ಕಾರ್ಯ ನಡೆಯಬೇಕು ಎನ್ನುವಷ್ಟರಲ್ಲಿಯೇ ವಧು ಇದ್ದಕ್ಕಿದ್ದಂತೆಯೇ ಮದುವೆಗೆ ನಿರಾಕರಿಸಿದ್ದರಿಂದ ಯುವಕ ಬೇರೆ ಯುವತಿಯೊಡನೆ ಮದುವೆ ಮಾಡಿಕೊಂಡ ಪ್ರಸಂಗ ಬುಧವಾರ ಇಲ್ಲಿ ನಡೆಯಿತು.
ಇಲ್ಲಿಯ ನಾಡವರ ಸಮುದಾಯ ಭವನ ಈ ಘಟನೆಗೆ ಸಾಕ್ಷಿಯಾಯಿತು. ಲಕ್ಷ್ಮೇಶ್ವರ ಗ್ರಾಮದ ಯುವಕ ಗುರುಪ್ರಸಾದ ಹಾಗೂ ಅಲಗೇರಿಯ ಪುಷ್ಪಾ ಅವರ ಮದುವೆಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದವು. ಆದರೆ ಹಸೆಮಣೆಯಲ್ಲಿದ್ದ ವಧು ಮದುವೆ ನಿರಾಕರಿಸಿ ಗಳಗಳನೇ ಅಳಲು ಆರಂಭಿಸಿದಳು. ಎರಡೂ ಕಡೆಯವರು ವಧುವನ್ನು ಎಷ್ಟೇ ವಿನಂತಿಸಿಕೊಂಡರೂ ಒಪ್ಪದ ಕಾರಣ ಇನ್ನೊಬ್ಬರಿಗೆ ‘ತಾಳಿಭಾಗ್ಯ’ ಒಲಿದು ಬರುವಂತಾಯಿತು.
ಯುವಕನ ಕಡೆಯವರು ನಂತರ ಬೇರೆ ಯುವತಿಯೊಂದಿಗೆ ಮದುವೆ ಮಾಡಲು ನಿರ್ಧರಿಸಿದರು. ಪಟ್ಟಣದ ಗುಡಿಗಾರ ಗಲ್ಲಿ ಸಮೀಪದ ರೂಪಾ ಅವರೊಂದಿಗೆ ಗುರುಪ್ರಸಾದ ಮದುವೆ ನಡೆಯಿತು.