ಹೆಣ್ಣೂರುಬಾಣಸವಾಡಿ: ‘ಅಂಗವಿಕಲರಿಗೆ ಪ್ರೋತ್ಸಾಹ ನೀಡುವ ಮೂಲಕ ಆತ್ಮವಿಶ್ವಾಸವನ್ನು ತುಂಬುವ ಕೆಲಸವನ್ನು ಮಾಡಬೇಕು’ ಎಂದು ಎಪಿಡಿ (ಅಸೋಸಿಯೇಷನ್ ಆಫ್ ಪಿಪಲ್ ವಿತ್ ಡಿಸೆಬಿಲಿಟಿ) ಕಾರ್ಯಕ್ರಮ ನಿರ್ದೇಶಕ ಗೋಪಿನಾಥ್ ತಿಳಿಸಿದರು.
ಬೋಯಿಂಗ್ ವಿಮಾನ ಸಂಸ್ಥೆಯು ಲಿಂಗಾರಾಜಪುರದ ಎಪಿಡಿ ಸೇವಾ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಗಾಲಿ ಕುರ್ಚಿಗಳನ್ನು ವಿತರಿಸಿ ಮಾತನಾಡಿದರು.
‘ಸ್ವಯಂ ಸೇವಾ ಸಂಸ್ಥೆಗಳು ಅಂಗವಿಕಲ ಮಕ್ಕಳ ಅಭಿವೃದ್ಧಿಗೆ ಮುಂದಾಗಬೇಕು ಆ ಮೂಲಕ ಅಂಗವಿಕಲ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬ ಬೇಕು’ ಎಂದು ಹೇಳಿದರು.
‘ಎಪಿಡಿ ಸಂಸ್ಥೆಯು 55 ವರ್ಷಗಳಿಂದ ಅಂಗವಿಕಲರ ಬೆಳವಣಿಗೆಗೆ ಪೂರಕವಾಗಿ ನಿಂತಿದೆ. ಸಂಸ್ಥೆಯಲ್ಲಿ ಅಂಗವಿಕಲ ಮಕ್ಕಳಿಗೆ ಶಿಕ್ಷಣ, ಮಾನಸಿಕ ವಿಕಾಸ, ಕಲೆ, ಉದ್ಯೋಗ ತರಬೇತಿ ಸೇರಿದಂತೆ 30 ಕ್ಕೂ ಮಕ್ಕಳ ವಿಕಾಸ ಕಾರ್ಯಕ್ರಮಗಳನ್ನು ಮಾಡಲಾಗುವುದು’ ಎಂದು ವಿವರಿಸಿದರು.
ಬೋಯಿಂಗ್ ಸಂಸ್ಥೆಯ ಸದಸ್ಯ ಅಜಿತ್ ಮಾತನಾಡಿ, ‘ಸಮಾಜದಲ್ಲಿ ಅಂಗವೈಕಲ್ಯತೆಯನ್ನು ತೊಡೆದು ಹಾಕಲು ಸ್ವಯಂ ಸೇವಾ ಸಂಸ್ಥೆಗಳು ಮುಂದಾಗಬೇಕು’ ಎಂದು ಮನವಿ ಮಾಡಿದರು.