ಮಧುಗಿರಿ: ಸೂಟು–ಬೂಟು ಧರಿಸಿ, ಕ್ಷೌರ ಮಾಡಿದ್ದವನೊಬ್ಬ. ಟೀ ಷರ್ಟ್– ಜೀನ್ಸ್ ಪ್ಯಾಂಟ್ ತೊಟ್ಟು, ಉದ್ದಕ್ಕೆ ಕೂದಲು ಬಿಟ್ಟಿದ್ದ ಮತ್ತೊಬ್ಬ. ಇವರಿಬ್ಬರ ಹಿಂದೆ ಸಾದಾ ಅಂಗಿ–ಪಂಚೆ ತೊಟ್ಟ ಹನ್ನೊಂದು ಮಂದಿ ನಡೆದು ಬರುತ್ತಿದ್ದರೆ ಅಲ್ಲಿದ್ದವರಿಗೆ ಕುತೂಹಲ.
ತಾಲ್ಲೂಕಿನ ಗರಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ– ಉಪಾಧ್ಯಕ್ಷ ಸ್ಥಾನದ ಆಯ್ಕೆಗಾಗಿ ಸೋಮವಾರ ಬಂದ ಜೆಡಿಎಸ್ ಬೆಂಬಲಿತ ಸದಸ್ಯರು, ಅವರ ಮುಂಭಾಗದಲ್ಲಿ ಕಂಡುಬಂದ ಖಾಸಗಿ ಭದ್ರತಾ ಸಿಬ್ಬಂದಿ ಸ್ಥಳೀಯರ ಹುಬ್ಬೇರಿಸುವಂತೆ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಟಿ.ಗೋವಿಂದರಾಜು ಅವರ ಮೇಲೆ ಈಚೆಗೆ ಹಲ್ಲೆಯಾಗಿತ್ತು. ಅವರ ಬೆಂಬಲಿಗ ಸದಸ್ಯರನ್ನು ಅಪಹರಿಸಿ, ಅಧಿಕಾರ ಹಿಡಿಯಲು ಮತ್ತೊಂದು ಗುಂಪು ಯತ್ನಿಸುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಇದೇ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟವೂ ನಡೆದಿತ್ತು. ಹೀಗಾಗಿ ಖಾಸಗಿ ಭದ್ರತಾ ಸಿಬ್ಬಂದಿಯೊಂದಿಗೆ ಸದಸ್ಯರು ಬಂದಿದ್ದನ್ನು ಗ್ರಾಮಸ್ಥರು ಕುತೂಹಲದಿಂದ ವೀಕ್ಷಿಸಿದರು. ಈ ದೃಶ್ಯಗಳನ್ನು ಕೆಲವರು ತಮ್ಮ ಮೊಬೈಲ್ ಫೋನ್ಗಳಿಂದ ಸೆರೆ ಹಿಡಿದರು.