ನಮ್ಮ ಮಹಾನ್ ನಾಯಕರು ತ್ಯಾಗ, ಬಲಿದಾನಗಳ ಮೂಲಕ ದೇಶವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಗೊಳಿಸಿದರು. ಆದರೆ
‘ಜಾತಿ’ ಎಂಬ ದಾಸ್ಯದಿಂದ ಜನರನ್ನು ಮುಕ್ತಗೊಳಿಸಲು ಈವರೆಗೂ ಯಾರಿಗೂ ಸಾಧ್ಯವಾಗಿಲ್ಲ. ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ತೊಡಕಾಗಿರುವುದು ಜಾತಿಗಳ ಮಧ್ಯೆ ಹುಟ್ಟಿಕೊಳ್ಳುವ ಸಂಘರ್ಷ. ಇಲ್ಲಿ ವ್ಯಕ್ತಿ ಹಾಗೂ ಕುಟುಂಬಕ್ಕೆ ಮನ್ನಣೆ ಸಿಗುವುದು ಅವರು ಯಾವ ಜಾತಿಯವರು ಎಂಬುದನ್ನು ಆಧರಿಸಿ. ವೈಯಕ್ತಿಕ ಪ್ರತಿಭೆ, ವಿದ್ಯಾರ್ಹತೆ ಮತ್ತು ಅನುಭವಗಳು ಲೆಕ್ಕಕ್ಕೆ ಇಲ್ಲವಾಗಿವೆ.
ರಾಜಕೀಯ ನೇತಾರರು ಕೆಲವರು ಬಳ್ಳಾರಿ ಹಾಗೂ ಗದಗ ತಾಲ್ಲೂಕಿನಲ್ಲಿ ಅನೇಕ ವರ್ಷಗಳಿಂದ ಸಾಮೂಹಿಕ ವಿವಾಹವನ್ನು ವಾರ್ಷಿಕೋತ್ಸವದಂತೆ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಅವೆಲ್ಲ ಜಾತಿ ಆಧಾರಿತವಾಗಿವೆ ಹೊರತು ಅಂತರ್ಜಾತಿ ಆಧಾರಿತವಲ್ಲ.
ಅಂತರ್ಜಾತಿ ಆಧಾರಿತ ಸಾಮೂಹಿಕ ವಿವಾಹಗಳು ಹಿಂದೂ ಧರ್ಮದ ಜೀವಂತಿಕೆಗೆ ಆಧಾರ ಆಗಬಲ್ಲವು. ಎಲ್ಲ ವಲಯಗಳ
ನೇತಾರರೂ ಜಾತಿ ಆಧಾರಿತ ರಾಜಕಾರಣ ಬಿಟ್ಟು, ಅರ್ಹತೆ ಮತ್ತು ಕರ್ತವ್ಯ ನಿಷ್ಠೆಗೆ ಮನ್ನಣೆ ನೀಡುವ ರಾಜಕಾರಣಕ್ಕೆ ಮುಂದಾಗಬೇಕು. ಆಗ ಮಾತ್ರ ಭಾರತ ಬಲಿಷ್ಠ ರಾಷ್ಟ್ರ ಆಗಲು ಸಾಧ್ಯ.
–ಕೆ.ಎಚ್.ಕೆ., ಬೆಂಗಳೂರು