ಮೇಲುಕೋಟೆ: ಅಂತರ್ಜಾಲವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಪಾಂಡವಪುರ ಕ್ಷೇತ್ರಶಿಕ್ಷಣಾಧಿಕಾರಿ ಚಂದ್ರಶೇಖರ್ ಕರೆನೀಡಿದರು.
ಮೇಲುಕೋಟೆಯ ಎಸ್ಇಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪಾಂಡವಪುರ ತಾಲ್ಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಬುಧವಾರ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕುಮಟ್ಟದ ವಿದ್ಯಾರ್ಥಿಗಳ ಅಂತರ್ಜಾಲ ಪ್ರಪಂಚ– -2015 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಇಂದು ತಂತ್ರಜ್ಞಾನ ಮುಂದುವರಿದಿದ್ದು, ಎಲ್ಲ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಮತ್ತು ಅಂತರ್ಜಾಲದ ಬಳಕೆ ಅನಿವಾರ್ಯವಾಗಿದೆ.ಈ ಕಾರಣ ನಾವು ಕಂಪ್ಯೂಟರ್ ಜ್ಞಾನ ಹೊಂದದಿದ್ದರೆ ವಿದ್ಯಾವಂತರಾದರೂ ಪ್ರಯೋಜನ ವಿಲ್ಲದಂತಾಗುತ್ತದೆ. ಈ ಕಾರಣದಿಂದ ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನ ಇಲಾಖೆಯ ಸೂಚನೆಯಂತೆ ಅಂತರ್ಜಾಲ ಪ್ರಪಂಚ ಕಾರ್ಯಕ್ರಮ ಹಮ್ಮಿಕೊಂಡು ತರಬೇತಿ ನೀಡಲಾಗುತ್ತಿದೆ.
ಮುಂದುವರಿದ ತಂತ್ರಜ್ಞಾನ ಬಳಸಿಕೊಂಡು ಅಂತರ್ಜಾಲದ ಮೂಲಕ ವಿದ್ಯಾರ್ಥಿಗಳು ಪ್ರಪಂಚದ ಎಲ್ಲಾ ವಿಧ್ಯಮಾನಗಳನ್ನೂ ತಿಳಿಯುವುದರ ಜೊತೆಗೆ ಪಠ್ಯಕ್ಕೆ ಪೂರಕವಾದ ಮಾಹಿತಿಗಳನ್ನು ಮಾತ್ರ ಹುಡುಕಿ ಅಧ್ಯಯನ ಮಾಡಬೇಕು’ ಎಂದರು.
ಎಸ್ಇಟಿ ಶಿಕ್ಷಣ ಸಂಸ್ಥೆಯ ರಿಜಿಸ್ಟ್ರಾರ್ ನಿಂಗೇಗೌಡ, ವಿಶೇಷ ಆಹ್ವಾನಿತರಾಗಿದ್ದ ತಾಲ್ಲೂಕು ಪಂಚಾಯಿತಿಯ ಮೇಲುಕೋಟೆ ಕ್ಷೇತ್ರದ ಸದಸ್ಯ ಶಾಮಣ್ಣ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಇಟಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣಯ್ಯ ವಹಿಸಿದ್ದರು. ಎಸ್ಇಟಿ ಶಿಕ್ಷಣ ಸಂಸ್ಥೆಯ ಟ್ರಸ್ಟಿ ನಂದೀಶ್, ಪಾಂಡವಪುರ ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಗೌಡ ಇದ್ದರು.