ಕನ್ನಡ ಭಾಷಾ ಮಾಧ್ಯಮ ಕಡ್ಡಾಯ ಆಗಬೇಕೆಂಬ ವಿಚಾರದಲ್ಲಿ ಹಿರಿಯ ಸಾಹಿತಿ ದೇವನೂರ ಮಹಾದೇವ ಅಪ್ಪಟ ಅಂಬೇಡ್ಕರ್ ವಾದಿಯಂತೆ ಕಂಡುಬಂದಿದ್ದಾರೆ. ಬಿ.ಆರ್. ಅಂಬೇಡ್ಕರ್ ಅವರ ನೇರ, ನಿಷ್ಠುರ, ಆತ್ಮವಿಶ್ವಾಸ, ಛಲ, ಸಂಘರ್ಷದ ಹೊಳಹು ಮಾತೃಭಾಷಾ ಮಾಧ್ಯಮದ ಹೋರಾಟದಲ್ಲಿ ನಿಚ್ಚಳವಾಗಿವೆ.
ಅದೇ ವೇಳೆಗೆ, ೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಕವಿ ಸಿದ್ಧಲಿಂಗಯ್ಯ ಅವರು ಈ ವಿಚಾರದಲ್ಲಿ ಗಾಂಧಿ ಮಾರ್ಗವನ್ನು ಅನುಸರಿಸುವುದಾಗಿ ಹೇಳುತ್ತಿದ್ದಾರೆ. ದೇವನೂರರು ತಮ್ಮ ಲೇಖನವೊಂದರಲ್ಲಿ ಜಾತಿ ವ್ಯವಸ್ಥೆ ಮನೆಗೆ ಅಂಬೇಡ್ಕರ್ ಹೊರಗೆ ನಿಂತು ಕಲ್ಲು ಹೊಡೆದರು.
ಮಹಾತ್ಮ ಗಾಂಧಿ ಅವರು ಆ ಮನೆಯ ಒಳಗೇ ಇದ್ದು ಮನೆಯ ಕಂಬಗಳನ್ನು ನಿಧಾನವಾಗಿ ಕೀಳುವ ಪ್ರಯತ್ನ ಮಾಡಿದ್ದರು ಎಂದು ಹೇಳುವ ಮೂಲಕ ಜಾತಿಪದ್ಧತಿ ವಿರುದ್ಧ ಈ ಇಬ್ಬರ ಹೋರಾಟದ ನಡುವಿನ ಸಾಮ್ಯತೆಯನ್ನು ಗುರುತಿಸಿದ್ದರು.
ಅದೀಗ ಮಾತೃಭಾಷಾ ಮಾಧ್ಯಮದ ವಿಚಾರದಲ್ಲಿ ಮರುಕಳಿಸಿದಂತಾಗಿದೆ. ಗಾಂಧಿ ಮಾರ್ಗವನ್ನು ಪರೋಕ್ಷವಾಗಿ ಸರಿ ಎಂದು ಸಮರ್ಥಿಸಿದ್ದ ದೇವನೂರರು, ಈಗ ತಾವೇ ಅಂಬೇಡ್ಕರ್ ಅವರ ಸಂಘರ್ಷದ ಹಾದಿಯನ್ನು ತುಳಿದಿರುವುದು ಆಶ್ಚರ್ಯವಾದರೂ ಸಮಂಜಸವಾದ ನಿಲುವು.
–-ಎಸ್.ಎಂ. ಮಂಜುಳಾ ನಂಜನಗೂಡು