ನವದೆಹಲಿ (ಪಿಟಿಐ): ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಹಾಗೂ ಬಾಲ್ಟಿಸ್ತಾನಗಳಲ್ಲಿ ಪಾಕಿಸ್ತಾನವು ಚುನಾವಣೆ ನಡೆಸಲು ಹೊರಟಿರುವುದಕ್ಕೆ ಭಾರತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
‘ಗಿಲ್ಗಿಟ್ ಹಾಗೂ ಬಾಲ್ಟಿಸ್ತಾನ್ ಸಬಲೀಕರಣ ಮತ್ತು ಸ್ವಯಂ ಆಡಳಿತ ಆದೇಶ’ದ ಅಡಿ ಜೂನ್ 8ರಂದು ಈ ಪ್ರಾಂತ್ಯಗಳಲ್ಲಿ ಚುನಾವಣೆ ನಡೆಸಲಾಗುತ್ತಿದೆ.
‘ಪಾಕಿಸ್ತಾನವು ಆ ಭಾಗದ ಜನರಿಗೆ ರಾಜಕೀಯ ಹಕ್ಕುಗಳನ್ನು ನಿರಾಕರಿಸುತ್ತ ಬಂದಿದೆ. ಅಲ್ಲದೇ ಆ ಪ್ರದೇಶಗಳನ್ನು ಒಳ ಹಾಕಿಕೊಳ್ಳಲು ಯತ್ನಿಸುತ್ತಿದೆ. ಗಿಲ್ಗಿಟ್ ಹಾಗೂ ಬಾಲ್ಟಿಸ್ತಾನ್ಗಳಲ್ಲಿ ತಾನು ಅಕ್ರಮವಾಗಿ ಹಕ್ಕು ಸ್ಥಾಪಿಸಿರುವುದನ್ನು ಚುನಾವಣೆ ಮೂಲಕ ಮುಚ್ಚಿಹಾಕಲು ಯತ್ನಿಸುತ್ತಿದೆ’ ಎಂದು ಭಾರತ ಆರೋಪಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್, ‘ಈ ವಿಚಾರದಲ್ಲಿ ಭಾರತದ ನಿಲುವು ಸ್ಪಷ್ಟವಾಗಿದೆ. ಗಿಲ್ಗಿಟ್ ಹಾಗೂ ಬಾಲ್ಟಿಸ್ತಾನ್ ಸೇರಿದಂತೆ ಇಡೀ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ’ ಎಂದು ಹೇಳಿದರು.
‘ಪಾಕಿಸ್ತಾನ ಈ ಪ್ರದೇಶಗಳನ್ನು ತನ್ನದಾಗಿಸಿಕೊಳ್ಳಲು ಯತ್ನಿಸುತ್ತಲೇ ಇದೆ. ಪಾಕ್ ಸಚಿವರೊಬ್ಬರು ಗಿಲ್ಗಿಟ್, ಬಾಲ್ಟಿಸ್ತಾನದ ಗವರ್ನರ್ ಆಗಿರುವುದೇ ಇದಕ್ಕೆ ಸಾಕ್ಷಿ. ‘ಅಲ್ಲದೇ ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದ ಜನ ಜನಾಂಗೀಯ ಹಿಂಸೆ, ಭಯೋತ್ಪಾದನೆಯಿಂದ ನಲುಗಿದ್ದಾರೆ. ಪಾಕಿಸ್ತಾನದ ಆಕ್ರಮಣಕಾರಿ ನೀತಿಯಿಂದಾಗಿ ಆರ್ಥಿಕ ಸಂಕಷ್ಟವನ್ನೂ ಎದುರಿಸುತ್ತಿದ್ದಾರೆ’ ಎಂದೂ ವಿಕಾಸ್ ಸ್ವರೂಪ್ ಆರೋಪಿಸಿದರು.