ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮರಳು ಸಾಗಣೆ ತಡೆ ವಿಫಲ

ಜಿ.ಪಂ. ಪ್ರಗತಿ ಪರಿಶೀಲನಾ ಸಭೆ: ಸಚಿವ ಪ್ರಮೋದ್‌ ಮಧ್ವರಾಜ್ ಎಚ್ಚರಿಕೆ
Last Updated 28 ಜುಲೈ 2016, 6:23 IST
ಅಕ್ಷರ ಗಾತ್ರ

ಉಡುಪಿ: ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಿಲ್ಲ ಹಾಗೂ ಮರಳಿನ ವಿಷಯದಲ್ಲಿ ಜಿಲ್ಲೆಯ ಹಿತಾಸಕ್ತಿ ಕಾಪಾಡುವಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಮೀನು ಗಾರಿಕೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್‌ ತೀವ್ರ ತರಾಟೆಗೆ ತೆಗದುಕೊಂಡರು.

ಬುಧವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಒಟ್ಟು ಮರಳಿನಲ್ಲಿ ಜಿಲ್ಲೆ ಜನರಿಗೆ ಎಷ್ಟು ಪೂರೈಕೆಯಾಗಿದೆ ಮತ್ತು ಹೊರ ಜಿಲ್ಲೆಗಳಿಗೆ ಹೋದ ಮರ ಳೆಷ್ಟು. ಸರ್ಕಾರಿ ಕಾಮಗಾರಿಗಳಿಗೆ ತೊಂದರೆ ಆಗದಂತೆ ಮರಳು ಸಂಗ್ರಹಣೆ ಮಾಡಲಾಗಿದೆಯೇ ಎಂದು ಕೇಳಿದರು.

ಇದಕ್ಕೆ ಉತ್ತರಿಸಿದ ಹಿರಿಯ ಭೂ ವಿಜ್ಞಾನಿ ಕೋದಂಡರಾಮ, ಶೇ40ರಷ್ಟು ಮರಳು ಸ್ಥಳೀಯರಿಗೆ ಉಳಿದ ಮರಳು ಹೊರ ಜಿಲ್ಲೆಗಳಿಗೆ ಪೂರೈಕೆಯಾಗಿದೆ ಎಂದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಹೊರ ಜಿಲ್ಲೆಗಳಿಗೆ ಮರಳು ಪೂರೈಕೆ ಮಾಡ ಬಾರದು ಎಂದು ಹಲವು ಬಾರಿ ಮನವಿ ಮಾಡಿದ್ದೆ. ಆದರೂ ಶೇ50ರಷ್ಟು ಮಾತ್ರ ಹೊರ ಜಿಲ್ಲೆಗಳಿಗೆ ಪೂರೈಸಬಹುದು ಎಂದು ಸುತ್ತೋಲೆ ಹೊರಡಿಸಲಾಗಿದೆ. ಇದನ್ನು ಮೀರಿ ಶೇ60ರಷ್ಟು ಹೊರ ಜಿಲ್ಲೆಗಳಿಗೆ ಹೋಗಿದ್ದು ಹೇಗೆ ಎಂದು ಪ್ರಶ್ನಿಸಿದರು.

ಕೆಡಿಪಿ ಸದಸ್ಯ ಉಮೇಶ್‌ ನಾಯ್ಕ್ ಮಾತನಾಡಿ, ಸ್ಥಳೀಯ ಲಾರಿಗಳು ಹೋದರೆ ಗುತ್ತಿಗೆದಾರರು ಮರಳು ನೀಡುವುದಿಲ್ಲ. ಅಧಿಕ ಬೆಲೆಗೆ ಹೊರ ಜಿಲ್ಲೆಯವರಿಗೆ ಮಾರುತ್ತಾರೆ. ಅಕ್ರಮದ ಬಗ್ಗೆ ದೂರು ನೀಡುವವರ ವಿರುದ್ಧ ಇಲಾಖೆಯ ಅಧಿಕಾರಿಗಳು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪ್ರಕರಣ ದಾಖಲಿಸುತ್ತಾರೆ. ಟ್ರಿಪ್‌ ಶೀಟ್‌ ಇಲ್ಲದ ಲಾರಿಗಳನ್ನು ಪೊಲೀಸರು ಹಿಡಿಯು ತ್ತಾರೆ. ಆದರೆ ಟ್ರಿಪ್‌ ಶೀಟ್‌ ಇಲ್ಲದವರಿಗೆ ಮರಳು ನೀಡುವ ಗುತ್ತಿಗೆದಾರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿದರು.

ವಂಡ್ಸೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಅರಣ್ಯ ಭೂಮಿಯಲ್ಲಿ ವಾಸವಾಗಿದ್ದ ಆರು ಕೊರಗ ಕುಟುಂಬಕ್ಕೆ ಮನೆ ನಿರ್ಮಿ ಸಿಕೊಡಿ ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಒತ್ತಾಯಿಸಿದರು.

ಕೊರಗ ಸಮುದಾಯವರ ಮನೆ ನಿರ್ಮಾಣಕ್ಕೆ ಸುಮಾರು ₹2 ಲಕ್ಷ  ವಿವಿಧ ಯೋಜನೆಗಳಲ್ಲಿ ಸಿಗುತ್ತದೆ. ಇದನ್ನು ₹4 ಲಕ್ಷಕ್ಕೆ ಏರಿಸಿ ಎಂದು ಇಲಾಖೆಗೆ ಪತ್ರ ಬರೆಯಿರಿ ಎಂದು ಅವರು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.

ವಿಧಾನಪರಿಷತ್‌ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಮಾತನಾಡಿ, ಕಡಿಮೆ ವೆಚ್ಚದಲ್ಲಿ ನಿರ್ಮಾಣ ಕಾಮಗಾರಿ ಮಾಡುವ ಉದ್ದೇಶಕ್ಕೆಂದೇ ನಿರ್ಮಿತಿ ಕೇಂದ್ರ ಇದೆ. ಆದರೆ ಅವರು ಆ ಕೆಲಸ ಮಾಡುತ್ತಿಲ್ಲ. ಎಲ್ಲ ಕೊರಗರಿಗೆ ನಿರ್ಮಿತಿ ಕೇಂದ್ರವೇ ಮನೆ ನಿರ್ಮಿಸಿಕೊಡಲಿ ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್‌, ಒಂದೇ ಭಾಗದಲ್ಲಿ ಆದರೆ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸ ಬಹುದು. ಆದರೆ ಅಲ್ಲಲ್ಲಿ ನಿರ್ಮಾಣ ಮಾಡುವುದಾದರೆ ₹4.50 ಲಕ್ಷ ಬೇಕಾಗುತ್ತದೆ ಎಂದರು.

ಮನೆ ವೆಚ್ಚವನ್ನು ಹೆಚ್ಚಿಸಲು ಹಾಗೂ ನಿರ್ಮಿತಿ ಕೇಂದ್ರದವರಿಂದಲೇ ಮನೆ ನಿರ್ಮಿಸಿ ಕೊಡುವ ಸಂಬಂಧ ನಿರ್ಣಯ ಕೈಗೊಳ್ಳಲಾಯಿತು. ಅಗತ್ಯ ಇರುವ ಕಡೆ ಅದರಲ್ಲೂ ಮುಖ್ಯವಾಗಿ ಪಡುಕೆರೆಯಲ್ಲಿ ಹೊಸ ನ್ಯಾಯ ಬೆಲೆ ಅಂಗಡಿ ಆರಂಭಿ ಸದಿರುವ ಬಗ್ಗೆಯೂ ಸಚಿವರು ಅಸಮಾ ಧಾನ ವ್ಯಕ್ತಪಡಿಸಿದರು.
ಎಲ್ಲದಕ್ಕೂ ನಿಯಮ ದಲ್ಲಿ ಅವಕಾಶ ಇಲ್ಲ ಎಂದು ಹೇಳಬೇಡಿ. ಜನರಿಗೆ ಅನುಕೂಲವಾ ಗುವಂತಿದ್ದರೆ ಮಾಡಿಕೊಡಿ ಎಂದು ಸೂಚನೆ ನೀಡಿ ದರು. ಎಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದವರಿಗೆ ಅಂತ್ಯೋದಯ ಕಾರ್ಡ್‌ ಬರುತ್ತಿರುವ ಬಗ್ಗೆ ಕೆಡಿಪಿ ಸದಸ್ಯರು ಗಮನ ಸೆಳೆದರು. ಸರ್ಕಾರಿ ನೌಕರಿ ಯಲ್ಲಿರುವ ದಂಪತಿಗೆ ಅಂತ್ಯೋದಯ ಕಾರ್ಡ್‌ ನೀಡಿ ಈಗ ಅವರಿಂದ ದಂಡ ವಸೂಲಿ ಮಾಡು ತ್ತಿರುವ ಬಗ್ಗೆ ಪ್ರಭಾರ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಗಮನ ಸೆಳೆದರು.

ತಾಂತ್ರಿಕ ದೋಷದಿಂದ ಹೀಗಾಗಿ ರುವ ಸಾಧ್ಯತೆ ಇದೆ. ಅದನ್ನು ಪರಿಶೀಲಿಸಿ ಸರಿಪಡಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ಯೋಗೇಶ್ವರ ತಿಳಿಸಿದರು.

ಬಹುಗ್ರಾಮ ಕುಡಿವ ನೀರಿನ ಯೋಜನೆ ಪೂರ್ಣಗೊಳ್ಳದಿರುವ ಬಗ್ಗೆ ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್ ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಅಧಿಕಾರಿಗಳು, ನಿಟ್ಟೆ ಗ್ರಾಮದ ಯೋಜನೆ ಮಾರ್ಚ್‌ ವೇಳೆಗೆ ಪೂರ್ಣ ಗೊಳಿಸಲಾಗುತ್ತದೆ ಎಂದರು. ಬಹು ಗ್ರಾಮ ಕುಡಿವ ನೀರಿನ ಯೋಜನೆ ಅನುದಾನ ಕೇಂದ್ರ ಸರ್ಕಾರ ಕಡಿತ ಮಾಡಿದೆ. ಶೇ50 ನೀಡುವ ಬದಲು ಶೇ40ರಷ್ಟು ಮಾತ್ರ ನೀಡುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT