ಬೆಂಗಳೂರು: ಯಲಹಂಕ–ದೊಡ್ಡಬಳ್ಳಾಪುರ ಮುಖ್ಯರಸ್ತೆ ಸುರಧೇನುಪುರ ಗೇಟ್ ಬಳಿ ಮುಖ್ಯ ರಸ್ತೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಹಂಚಿಕೆ ಮಾಡಲಾಗಿದ್ದ ಸುಮಾರು ₹3 ಕೋಟಿ ಮೌಲ್ಯದ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಲಾಯಿತು.
ತಾಲ್ಲೂಕು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಆದೇಶದಂತೆ ಗುರುವಾರ ಅರ ಕೆರೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಾಲತೇಶ್ ಹಾಗೂ ಕಾರ್ಯದರ್ಶಿ ಕೆ.ವೀರೇಗೌಡರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಭೂಮಿಯನ್ನು ವಶಕ್ಕೆ ಪಡೆದು ಕಾಂಪೌಂಡ್ ನಿರ್ಮಿಸಲಾಯಿತು.
ಅರಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುರಧೇನುಪುರ ಗ್ರಾಮದ ಸರ್ವೆ ನಂ.119ರಲ್ಲಿ 1991ರಲ್ಲಿ ಬಸವಲಿಂಗಪ್ಪ ಬಡಾವಣೆ ನಿರ್ಮಿಸಲಾಗಿತ್ತು. ಆ ಬಡಾವಣೆಯಲ್ಲಿನ 194,195,196,204,205, 206, 207 ಹಾಗೂ 208 ಸಂಖ್ಯೆಯ ಒಟ್ಟು 9 ನಿವೇಶನಗಳನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ವಿತರಿಸಲಾಗಿದೆ ಎಂದು ಸಾರ್ವಜನಿಕರಿಂದ ದೂರು ಕೇಳಿಬಂದಿದ್ದವು.