ಗೌರಿ ಗಣೇಶ ಹಬ್ಬ ಸಮೀಪಿಸುತ್ತಿದ್ದಂತೆ ಲಂಬೋದರನಿಗೆ ವಿವಿಧ ರೂಪ ನೀಡಲು, ಇದರಲ್ಲಿಯೇ ತಮ್ಮ ಕಲೆಯ ಚಾಕಚಕ್ಯತೆ ಪ್ರದರ್ಶಿಸಲು ಕಲಾವಿದರಲ್ಲಿ ಎಗ್ಗಿಲ್ಲದ ಉತ್ಸಾಹ. ಮಣ್ಣಿನ ಗಣಪ, ಕಲ್ಲಿನ ಗಣಪ, ಕಂಚಿನ ಗಣಪ, ಮರದ ಗಣಪ ಹೀಗೆ ಹಲವಾರು ರೀತಿಯ ಗಣಪನನ್ನು ನೋಡಿದ್ದೇವೆ. ಆದರೆ ಇವೆಲ್ಲಕ್ಕಿಂತ ಭಿನ್ನವಾದ ಗಣಪ ಇಲ್ಲಿದ್ದಾನೆ.
ಯಾವುದೇ ಒಂದು ಹೆಸರು, ಶಬ್ದ, ವಾಕ್ಯ ಕೊಟ್ಟರೂ ಅದನ್ನು ಬಳಸಿಕೊಂಡೇ ಈ ಗಣಪ ಇಲ್ಲಿ ರೂಪುತಳೆಯುತ್ತಾನೆ. ಕೊಟ್ಟಿರುವ ಹೆಸರಿನಲ್ಲಿ ಅಕ್ಷರಗಳನ್ನು ಪೋಣಿಸಿ ಒಂದೇ ನಿಮಿಷದ ಒಳಗೆ ಗಣಪ ಅನಾವರಣಗೊಳ್ಳುತ್ತಾನೆ! ಈ ರೀತಿ ಅಪರೂಪದ ವಿಘ್ನವಿನಾಶಕ ಮೈದಳೆಯುವುದು ಬೆಂಗಳೂರಿನ ವೆಂಕಟೇಶ್ ಎಲ್ಲೋರ್ ಅವರ ಕೈಗಳಿಂದ.
ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವ ವೆಂಕಟೇಶ್ ಅವರು ಈಗಾಗಲೇ15ಸಾವಿರಕ್ಕೂ ಅಧಿಕ ಗಣಪತಿ ವೈವಿಧ್ಯವನ್ನು ತಯಾರಿಸಿದ್ದಾರೆ. ಇವರು ಚಿತ್ರ ಬಿಡಿಸಲು ಆರಂಭಿಸಿದರೆ ಒಂದೇ ಕ್ಷಣದಲ್ಲಿ ಹತ್ತಾರು ಬಗೆಯ ಗಣೇಶ ಸೃಷ್ಟಿಯಾಗುತ್ತಾನೆ. ತಾಮ್ರ, ಕಂಚು, ಸ್ಟೀಲ್, ಬಂಗಾರ, ಕಲ್ಲು, ಉಸುಕಿನಿಂದ ಬಿಡಿಸಿರುವ ಚಿತ್ರಗಳು ಒಂದಕ್ಕಿಂತ ಒಂದು ಆಕರ್ಷಣೀಯವಾಗಿವೆ.