ದೇ. ಜವರೇಗೌಡರು ಹಿಂದೂ ಮತದ ಮೇಲೆ ತಮಗೆ ಗೌರವವಿಲ್ಲವೆಂದು ಹೇಳಿರುವುದನ್ನು (ಪ್ರ.ವಾ., ಆ.31) ಓದಿ ಆಘಾತವಾಯಿತು. ತಾರತಮ್ಯವನ್ನು ಪ್ರತಿಪಾದಿಸುವುದರಿಂದ ಅದು ಧರ್ಮವೇ ಅಲ್ಲ ಎಂದಿದ್ದಾರೆ. ಜವರೇಗೌಡರ ಕೃತಿಗಳನ್ನು ಓದಿರುವ, ಅವರನ್ನು ಗೌರವಿಸುವ ನಾನು ಇದನ್ನು ಅವರ ವೈಯಕ್ತಿಕ ಅಭಿಪ್ರಾಯವೆಂದು ಪರಿಗಣಿಸಿ ಒಪ್ಪಿಕೊಳ್ಳುತ್ತೇನೆ.
ಅವರು ಏಸುವನ್ನು ಪೂಜಿಸುವುದಕ್ಕೂ ಯಾರ ಅಭ್ಯಂತರವೂ ಇಲ್ಲ. ಆದರೆ ಎಲ್ಲ ಧರ್ಮೀಯರೂ ಸಹಿಷ್ಣುತೆಯಿಂದ ಬಾಳಬೇಕಾಗಿರುವ ದೇಶದಲ್ಲಿ ನಾವು ಪರಸ್ಪರರ ಧರ್ಮವನ್ನು, ನಂಬಿಕೆಯನ್ನು ಗೌರವಿಸಬೇಕಲ್ಲವೇ? ಈ ರೀತಿ ಸಾರ್ವಜನಿಕ ವೇದಿಕೆಯಲ್ಲಿ ಎಲ್ಲರೂ ತಾನು ಇಂತಹ ಧರ್ಮವನ್ನು ಗೌರವಿಸುವುದಿಲ್ಲ ಎಂದು ಘೋಷಿಸಲು ಹೊರಟರೆ ಪರಿಸ್ಥಿತಿ ಏನಾದೀತು?
ನಮ್ಮ ಕಾನೂನು ನಮಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದೆ. ನಾವು ಯಾರನ್ನಾದರೂ ಪೂಜಿಸಬಹುದು. ಜವರೇಗೌಡರು ತಾವು ಏಸುವನ್ನು ಪೂಜಿಸುವುದು ಏಕೆ ಎಂಬುದರ ಬಗ್ಗೆ ವಿವರಿಸಿದ್ದಾರೆ. ಅಷ್ಟೇ ಸಾಕಿತ್ತು. ಈಗಾಗಲೇ ನಾವು ಹಲವು ಧಾರ್ಮಿಕ ಮೂಲಭೂತವಾದಿಗಳ ಪ್ರಚೋದನಾತ್ಮಕ ಹೇಳಿಕೆಗಳಿಂದ ತತ್ತರಿಸಿದ್ದೇವೆ. ಸಾಹಿತಿಗಳು ನಾಡಿನ ಎಲ್ಲ ಸಮುದಾಯಗಳ ದಾರಿದೀಪ. ಅವರು ಯಾರನ್ನೂ ಅಸ್ಪೃಶ್ಯರನ್ನಾಗಿ ಕಾಣಬಾರದು.