ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಹಿಂದೂ ರಾಷ್ಟ್ರೀಯತೆಯ ಪ್ರತಿಪಾದಕರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಮದನ ಮೋಹನ ಮಾಳವೀಯ ಅವರು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
ಗುರುವಾರ ಈ ಇಬ್ಬರೂ ಮುತ್ಸದ್ದಿಗಳ ಹುಟ್ಟುಹಬ್ಬದ ದಿನವಾಗಿದೆ. ಬಿಜೆಪಿ ಹಿರಿಯ ನಾಯಕ ವಾಜಪೇಯಿ ಅವರ 90ನೇ ಹಾಗೂ ಮಾಳವೀಯ ಅವರ 153ನೇ ಹುಟ್ಟುಹಬ್ಬ ಇದಾಗಿದೆ.
‘ಪಂಡಿತ ಮದನ ಮೋಹನ ಮಾಳವೀಯ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರು ಭಾರತ ರತ್ನ ಪ್ರಶಸ್ತಿಗೆ ಪಾತ್ರರಾಗಿದ್ದಾರೆ ಎಂಬುದನ್ನು ತಿಳಿಸಲು ಸಂತಸವಾಗುತ್ತಿದೆ’ ಎಂದು ರಾಷ್ಟ್ರಪತಿ ಭವನವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಇದರೊಂದಿಗೆ ಈ ಹೆಮ್ಮೆಯ ಪ್ರಶಸ್ತಿಗೆ ಇದುವರೆಗೂ ಪಾತ್ರರಾದವರ ಸಂಖ್ಯೆ 45ಕ್ಕೆ ಏರಿದೆ.
ಆಯ್ಕೆ ಹೇಗೆ?
ಪ್ರಧಾನಿಯಾದವರು ಭಾರತ ರತ್ನ ಪ್ರಶಸ್ತಿಗೆ ಹೆಸರನ್ನು ಸೂಚಿಸಿ ರಾಷ್ಟ್ರಪತಿ ಅವರಿಗೆ ಕಳುಹಿಸುತ್ತಾರೆ. ರಾಷ್ಟ್ರಪತಿ ಅವರು ಅಂಕಿತ ಹಾಕಿದ ನಂತರ ಪುರಸ್ಕೃತರ ಹೆಸರನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ಈ ಪ್ರಶಸ್ತಿ ಜತೆ ಯಾವುದೇ ನಗದು ಪುರಸ್ಕಾರ ಇರುವುದಿಲ್ಲ. ಪ್ರಶಸ್ತಿ ಪತ್ರ ಹಾಗೂ ಅರಳಿ ಎಲೆ ಆಕಾರದ ಪದಕವನ್ನು ನೀಡಲಾಗುತ್ತದೆ. ಈ ಪ್ರಶಸ್ತಿ ಸ್ಥಾಪನೆಯಾಗಿದ್ದು 1954ರ ಜನವರಿ 2ರಂದು.
* * *
ದೇಶದ ಇಬ್ಬರು ಹೆಸರಾಂತ ಕಟ್ಟಾಳುಗಳಿಗೆ ಈ ಪ್ರಶಸ್ತಿ ಸಂದಿರುವುದು ಅವರು ಸಲ್ಲಿಸಿದ ಸೇವೆಗೆೆ ಸೂಕ್ತ ಗೌರವವಾಗಿದೆ
– ಪ್ರಧಾನಿ ನರೇಂದ್ರ ಮೋದಿ
* ಶಿಕ್ಷಣ ತಜ್ಞ ಮದನ ಮೋಹನ ಮಾಳವೀಯ ಅವರ 153ನೇ ಜನ್ಮ ವರ್ಷ
* ಮುಖ್ಯ ಸಾಧನೆ: ಬನಾರಸ್ ಹಿಂದೂ ವಿಶ್ವವಿದ್ಯಾಲಯ ಸ್ಥಾಪನೆ |
* ಡಿಸೆಂಬರ್ 25 ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 90ನೇ ಜನ್ಮ ದಿನ * ಭಾರತವನ್ನು ಪರಮಾಣು ಅಸ್ತ್ರ ಹೊಂದಿರುವ ರಾಷ್ಟ್ರ ಎಂದು ಘೋಷಿಸಿ ಇಡೀ ವಿಶ್ವವನ್ನು ನಿಬ್ಬೆರಗಾಗಿಸಿದ ಹೆಗ್ಗಳಿಕೆ * ಜವಾಹರಲಾಲ್ ನೆಹರೂ ಹಾಗೂ ಇಂದಿರಾ ಗಾಂಧಿ ಅವರ ನಂತರದಲ್ಲಿ ದೇಶದ ಹೆಸರಾಂತ ರಾಜಕೀಯ ನಾಯಕರಾಗಿ ಗುರುತಿಸಿಕೊಂಡವರು * ದೆಹಲಿ ಹಾಗೂ ಪಾಕಿಸ್ತಾನದ ಲಾಹೋರ್ ಮಧ್ಯೆ ಜನಸಂಪರ್ಕ ಹೆಚ್ಚಿಸಲು 1999ರ ಫೆಬ್ರುವರಿಯಲ್ಲಿ ಬಸ್ ಸೇವೆಗೆ ಚಾಲನೆ (2001ರಲ್ಲಿ ಸಂಸತ್ ಭವನದ ಮೇಲೆ ನಡೆದ ಉಗ್ರರ ದಾಳಿ ಬಳಿಕ ಈ ಸೇವೆ ರದ್ದಾಯಿತು) * 1998ರಿಂದ 2004: ಪ್ರಧಾನಿಯಾಗಿ ಸೇವೆ |
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.