ನವದೆಹಲಿ (ಪಿಟಿಐ): ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಅವರ ಅಧಿಕೃತ ಅಂತರ್ಜಾಲ ತಾಣಕ್ಕೆ ಸೋಮವಾರ ಕನ್ನ (ಹ್ಯಾಕ್) ಹಾಕಲಾಗಿದ್ದು, ಪಾಕಿಸ್ತಾನದ ಪ್ರಜೆಯ ಕೈವಾಡ ಇರಬಹುದು ಎಂದು ಶಂಕಿಸಲಾಗಿದೆ.
ಹ್ಯಾಕರ್ ತನ್ನನ್ನು ಮೊಹಮ್ಮದ್ ಬಿಲಾಲ್ ಎಂದು ಹೇಳಿಕೊಂಡಿದ್ದು, ‘ಪಾಕಿಸ್ತಾನ ಜಿಂದಾಬಾದ್’ (ಪಾಕಿಸ್ತಾನಕ್ಕೆ ಜಯವಾಗಲಿ), ‘ಮುಕ್ತ ಕಾಶ್ಮೀರ’ (ಫ್ರೀ ಕಾಶ್ಮೀರ) ಎಂದು ಅಂತರ್ಜಾಲ ತಾಣದಲ್ಲಿ ಬರೆದುಕೊಂಡಿದ್ದಾನೆ. ಕಾಶ್ಮೀರದಲ್ಲಿ ಸೇನೆ ಆಡಳಿತ ಕೊನೆಗೊಳಿಸಬೇಕೆಂದೂ ಹೇಳಿದ್ದಾನೆ.
ಸ್ವತಂತ್ರ ಕಾಶ್ಮೀರವೇ ಮುಖ್ಯ ಉದ್ದೇಶ ಎಂದೂ ಪೋಸ್ಟ್ ಮಾಡಲಾಗಿದೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ತಮ್ಮ ಬಳಿ ಇಬ್ಬರು ಸಂಧಾನಕಾರರನ್ನು ಕಳುಹಿಸಿದ್ದರು ಎಂದು ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡ ಸೈಯದ್ ಅಲಿ ಷಾಹ ಗಿಲಾನಿ ಅವರು ಹೇಳಿಕೊಂಡ ಬೆನ್ನಲ್ಲೆ ಈ ಬೆಳವಣಿಗೆ ನಡೆದಿದೆ. ಚುನಾವಣಾ ಪ್ರಚಾರಕ್ಕಾಗಿ ತಮಿಳುನಾಡು ಪ್ರವಾಸದಲ್ಲಿರುವ ಅಡ್ವಾಣಿ ಅವರಿಗೆ ಈ ವಿಷಯ ತಿಳಿದಿಲ್ಲ.