ಅಪೂರ್ವ
ನಿರ್ಮಾಣ – ನಿರ್ದೇಶನ: ವಿ. ರವಿಚಂದ್ರನ್, ತಾರಾಗಣ: ರವಿಚಂದ್ರನ್, ಅಪೂರ್ವ, ಸುದೀಪ್, ರವಿಶಂಕರ್
ತನಗೆ ದಕ್ಕದೆ ಹೋದ ಪ್ರೇಮ ಬೇರೆಯವರಿಗೂ ದೊರಕಬಾರದು ಎನ್ನುವ ಕಾರಣದಿಂದಾಗಿ ಹುಡುಗಿಯರ ಮೇಲೆ ಹಲ್ಲೆ ನಡೆಸುವ, ಆ್ಯಸಿಡ್ ಎರಚುವ ದುಷ್ಟ ಹುಡುಗರಿದ್ದಾರೆ. ‘ಅಪೂರ್ವ’ ಚಿತ್ರದ ನಾಯಕ ಇಷ್ಟು ಕೆಟ್ಟವನಲ್ಲ. ತನ್ನನ್ನು ಪ್ರೇಮಿಸಿದ ಹುಡುಗಿ ಬೇರೆಯವರ ಪಾಲಾಗುವುದು ಖಚಿತವಾದಾಗ, ಆತ ಹುಡುಗಿಯೊಂದಿಗೆ ತಾನೂ ಸಾಯುತ್ತಾನೆ. ಮಧುರ ಅನುಭೂತಿಗೆ ಕಾರಣವಾಗಬೇಕಾದ ಕಾಫಿ ಸಾವಿನ ಪೇಯವಾಗುತ್ತದೆ. ಸಿನಿಮಾದಿಂದ ಸಾಮಾಜಿಕ ಪರಿಣಾಮ ಸಾಧ್ಯ ಎನ್ನುವುದಾದರೆ– ಇನ್ನುಮುಂದೆ, ಹುಡುಗರು ಕಾಫಿಗೆ ಕರೆದರೆ ಹುಡುಗಿಯರು ಹಿಂಜರಿಯಬಹುದು!
ರವಿಚಂದ್ರನ್ ತಮ್ಮ ಮಹತ್ವಾಕಾಂಕ್ಷೆಯ ಸಿನಿಮಾ ಎಂದು ಹೇಳಿಕೊಂಡಿರುವ ‘ಅಪೂರ್ವ’ ಚಿತ್ರದಲ್ಲಿ ಒಂದಷ್ಟು ವಿಶೇಷಗಳಿವೆ. ಅಂಥದೊಂದು ವಿಶೇಷ ಸಿನಿಮಾದ ನಡು ಭಾಗಕ್ಕೆ ಸಂಬಂಧಿಸಿದ್ದು. ಈ ‘ನಡು’ ನಾಯಕಿಗೆ ಸಂಬಂಧಿಸಿದ್ದಲ್ಲ. ಹಾಗೆನೋಡಿದರೆ, ರವಿಚಂದ್ರನ್ ಚಿತ್ರಗಳಲ್ಲೇ ‘ಅಪೂರ್ವ’ ಒಂದು ಬಗೆಯಲ್ಲಿ ಡೀಗ್ಲಾಮರೈಸ್ ಸಿನಿಮಾ. ಹೊಕ್ಕಳ ಮೇಲೆ ಉರುಳಾಡಬೇಕಾದ ಸೇಬನ್ನು ನಾಯಕ ತನ್ನ ಹುಡುಗಿಗೆ ತಿನ್ನಲು ಕೊಡುವ ದೃಶ್ಯವೊಂದೇ ಸಾಕು, ಈ ಸಿನಿಮಾದಲ್ಲಿ ರವಿಚಂದ್ರನ್ರ ‘ರಸಸಿದ್ಧಾಂತ’ ಬದಲಾಗಿದೆ ಎನ್ನುವುದಕ್ಕೆ. ಆ ವಿಷಯ ಒತ್ತಟ್ಟಿಗಿರಲಿ– ‘ನಡು’ವಿನ ವಿಶೇಷ ಗಮನಿಸೋಣ. ಸಾಮಾನ್ಯವಾಗಿ ಕನ್ನಡ ಚಿತ್ರಗಳು ವಿರಾಮಕ್ಕೆ ಮುನ್ನ ಚೆನ್ನಾಗಿದೆ ಅನ್ನಿಸುವುದು, ವಿರಾಮದ ನಂತರ ಇದ್ದಕ್ಕಿದ್ದಂತೆ ಕುಸಿಯುವುದು ಸಹಜವಷ್ಟೇ! ಈ ನಿಟ್ಟಿನಲ್ಲಿ ಅಪೂರ್ವ ಭಿನ್ನ. ಸಿನಿಮಾದ ಮೊದಲ ಅರ್ಧ ತಾಸು ಹಾಗೂ ಕೊನೆಯ ಅರ್ಧ ತಾಸುಗಳ ಬಗ್ಗೆ ಅಷ್ಟೇನೂ ತಲೆ ಕೆಡಿಸಿಕೊಳ್ಳದ ನಿರ್ದೇಶಕರು, ಅದರ ‘ನಡು’ವಿನ ಭಾಗವನ್ನು ಚೆಂದವಾಗಿ ನಿರೂಪಿಸಿದ್ದಾರೆ. ತಡವಾಗಿ ಸಿನಿಮಾಕ್ಕೆ ಬಂದು, ಬೇಗ ಎದ್ದುಹೋಗುವ ಆತುರಗಾರರಿಗೆ ‘ಅಪೂರ್ವ’ ಅತ್ಯುತ್ತಮ ಚಿತ್ರ.
ಸಿನಿಮಾದ ಮತ್ತೊಂದು ವಿಶೇಷ ನಾಯಕ ಕೇವಲ ಮನುಷ್ಯನಾಗಿರುವುದು. ಹೊಡೆದಾಟದ ಸನ್ನಿವೇಶವೊಂದನ್ನು ಹೊರತುಪಡಿಸಿದರೆ ಉಳಿದಂತೆ ನಾಯಕ ಅಸಹಾಯಕ ಜನಸಾಮಾನ್ಯರ ಪ್ರತಿನಿಧಿ. ಅರ್ಧ ತಲೆ ನೆರೆತ ಈ ನಾಯಕನಿಗೆ ಅರವತ್ತು ದಾಟಿದೆ ಎನ್ನುವುದು ಕೂಡ ವಿಶೇಷವೇ. ವಯಸ್ಸಾದ ನಾಯಕರು ನಾಯಕಿಯನ್ನು ಬಯಸಿದರೆ ಅದು ದುರಂತದಲ್ಲಿ ಕೊನೆಗೊಳ್ಳುತ್ತದೆ ಎನ್ನುವುದನ್ನು ಕೂಡ ರವಿಚಂದ್ರನ್ ಸೊಗಸಾಗಿ ಹೇಳಿದ್ದಾರೆ. ಅರವತ್ತೊಂದು ವರ್ಷಗಳನ್ನು ಕಂಡ ಪ್ರಬುದ್ಧ ಮನುಷ್ಯ, ತನ್ನ ಬದುಕಿನಲ್ಲಿ ಕ್ಷಣಕಾಲ ಬೀಸಿದ ವಸಂತವನ್ನು ಅವಿಸ್ಮರಣೀಯಗೊಳಿಸಲು ಪ್ರಯತ್ನಿಸದೆ, ಅದನ್ನು ಶಾಶ್ವತವಾಗಿ ತನ್ನದಾಗಿಸಿಕೊಳ್ಳಲು ಹಂಬಲಿಸುವ ಪೆದ್ದುತನ ಕೂಡ ಪರಿಣಾಮಕಾರಿಯಾಗಿ ನಿರೂಪಣೆಗೊಂಡಿದೆ. ‘ಅತಿ ಆಸೆ ದುಃಖಕ್ಕೆ ಮೂಲ’ ಎನ್ನುವ ಸಂದೇಶವೂ ಚಿತ್ರದಲ್ಲಿದೆ.
ಸಿನಿಮಾದ ಮತ್ತೊಂದು ವಿಶೇಷ ಜಿ.ಎಸ್.ವಿ. ಸೀತಾರಾಂ ಅವರ ಛಾಯಾಗ್ರಹಣ. ಲಿಫ್ಟ್ ಚೌಕಟ್ಟಿನಲ್ಲೇ ಬಣ್ಣದ ಲೋಕವೊಂದನ್ನು ಸೃಷ್ಟಿಸುವುದು ಅವರಿಗೆ ಸಾಧ್ಯವಾಗಿದೆ. ರವಿಚಂದ್ರನ್ರ ಸಂಗೀತ ಸಂಯೋಜನೆ ಕೂಡ ‘19–61’ ರ ಪ್ರೇಮಕಥೆಯನ್ನು ರಮಣೀಯವಾಗಿಸಿದೆ. ನಗರದ ಮಾಲ್ ಅನ್ನು ಉಗ್ರರು ತಮ್ಮ ತೆಕ್ಕೆಗೆ ತೆಗೆದುಕೊಂಡ ಸಂದರ್ಭದಲ್ಲಿ ನಾಯಕ–ನಾಯಕಿ ಲಿಫ್ಟ್ನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರಷ್ಟೇ. ಹೊರಗೆ ಅಮಾಯಕರ ಮೇಲೆ ಉಗ್ರರ ದೌರ್ಜನ್ಯ ನಡೆಯುವುದನ್ನು ಧ್ವನಿಗಳ ಮೂಲಕವೇ ಚಿತ್ರಿಸಿರುವ ತಂತ್ರ ನಿಜಕ್ಕೂ ‘ಅಪೂರ್ವ’ವಾಗಿದೆ (ಧ್ವನಿಯ ಮೂಲಕವೇ ಪ್ರಕಾಶ್ ರೈ, ತಾರಾ, ಸುದೀಪ್ ಹಾಗೂ ರವಿಶಂಕರ್ ಕಾಡುತ್ತಾರೆ). ಆದರೆ, ಇದೇ ಲಿಫ್ಟ್ ಪ್ರೇಮಿಗಳ ಪಾಲಿಗೆ ಸಮಾಧಿಯೂ ಆಗುವುದು ಪ್ರೇಕ್ಷಕರನ್ನು ಖಿನ್ನರನ್ನಾಗಿಸುತ್ತದೆ. ಪ್ರೇಕ್ಷಕರ ಈ ಭಾವಪರವಶತೆಯನ್ನು ಹೊಸ ಹುಡುಗಿ ಅಪೂರ್ವ ಹಾಗೂ ಅನುಭವಿ ‘ಮಲ್ಲ’ ರವಿಚಂದ್ರನ್ರ ಅಭಿನಯ ಚಾತುರ್ಯಕ್ಕೆ ಸಾಕ್ಷಿ ಎನ್ನಬಹುದು.
ಅಕ್ಷರ ಹಾಗೂ ದೃಶ್ಯದ ಸಾಧ್ಯತೆಗಳ ಸಮತೋಲನ ‘ಅಪೂರ್ವ’ ಚಿತ್ರದ ಮತ್ತೊಂದು ವಿಶೇಷ. ಬಹುಶಃ, ಕನ್ನಡ (ಭಾರತೀಯ?) ಚಿತ್ರರಂಗದಲ್ಲಿ ಇಂಥ ಪ್ರಯೋಗ ಇದೇ ಮೊದಲು. ದೃಶ್ಯಗಳು ಹೊಮ್ಮಿಸಲಾಗದ ಭಾವವನ್ನು ರವಿಚಂದ್ರನ್ ಅಕ್ಷರಗಳ ಮೂಲಕ ತುಂಬಿಕೊಡುತ್ತಾರೆ. ಈ ಅಕ್ಷರಗಳು ಇಂಗ್ಲಿಷ್ನಲ್ಲಿ ಇರುವ ಮೂಲಕ ಚಿತ್ರಕ್ಕೊಂದು ಜಾಗತಿಕ ಆಯಾಮವೂ ದೊರೆತಿದೆ. ‘ಅಪೂರ್ವ’ ಎನ್ನುವುದಕ್ಕೆ ಪಶ್ಚಿಮ ಎನ್ನುವ ಅರ್ಥವನ್ನು ಹಚ್ಚುವುದಾದರೆ, ಪೂರ್ವ ಸೀಮೆಯ ಚಿತ್ರವೊಂದು ಇಂಗ್ಲಿಷ್ ಮೂಲಕ ಪಶ್ಚಿಮಕ್ಕೂ ಸಂದಿದೆ.
ಕೊನೆಯದಾಗಿ ಹೇಳಬಹುದಾದ ಮಾತು: ‘ಅಪೂರ್ವ’ದಂಥ ಚಿತ್ರಗಳು ನಿರ್ದೇಶಕರ ಆತ್ಮವಿಶ್ವಾಸದಲ್ಲಿ ರೂಪುಗೊಳ್ಳುತ್ತವೆ. ಅತಿಯಾದ ಆತ್ಮವಿಶ್ವಾಸದಲ್ಲಿ ಕೊಂಚ ಹುಂಬತನವೂ ಇರುತ್ತದೆ ಎಂದು ಹೇಳಿದರೆ ‘ಅಪೂರ್ವ’ ಚಿತ್ರದ ವಿಷಯದಲ್ಲಿ ಸಿನಿಕತನ ಆದೀತೆ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.