ಬೆಂಗಳೂರು: ಸಿದ್ಧ ಉಡುಪು ಕಾರ್ಖಾನೆ ಮಹಿಳಾ ಉದ್ಯೋಗಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಡಿ ವಿಶ್ವೇಶ್ವರಯ್ಯ ಕೈಗಾರಿಕಾ ತರಬೇತಿ ಸಂಸ್ಥೆಯ (ವಿಐಟಿಸಿ) ಸೂಪರಿಂಟೆಂಡೆಂಟ್ ಲಕ್ಕಪ್ಪನಾಯಕ್ (50) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ಲಗ್ಗೆರೆ ಸಮೀಪದ ಚೌಡೇಶ್ವರಿನಗರದ ಮಹಿಳೆ ದೂರು ಕೊಟ್ಟಿದ್ದರು. ‘ಗೆಳತಿಯ ಮುಖಾಂತರ ಲಕ್ಕಪ್ಪನಾಯಕ್ ಅವರ ಪರಿಚಯವಾಗಿತ್ತು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ನನಗೆ, ಸಾಲ ಕೊಡಿಸುವುದಾಗಿ ಅವರು ನಂಬಿಸಿದ್ದರು. ಬುಧವಾರ ಗೆಳತಿ ಮನೆಗೆ ಬಂದ ಅವರು, ನನ್ನ ಜತೆ ಅನುಚಿತವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿದರು’ ಎಂದು ಅವರು ಆರೋಪಿಸಿದ್ದಾರೆ.
‘ದೂರು ನೀಡಿದ ಮಹಿಳೆಗೆ ಪ್ರತಿದಿನ ಕರೆ ಮಾಡುತ್ತಿದ್ದ ಆರೋಪಿ, ಅಶ್ಲೀಲವಾಗಿ ಮಾತನಾಡುತ್ತಿದ್ದ. ಅಲ್ಲದೆ, ಏಕಾಂಗಿಯಾಗಿ ಭೇಟಿಯಾಗುವಂತೆ ಒತ್ತಾಯಿಸುತ್ತಿದ್ದ. ಆತನ ಸಂಚಿನ ಬಗ್ಗೆ ಅರಿತ ಮಹಿಳೆ, ಆರೋಪಿಯನ್ನು ಸಾಕ್ಷ್ಯ ಸಮೇತ ಪೊಲೀಸರಿಗೆ ಹಿಡಿದು ಕೊಡಲು ನಿರ್ಧರಿಸಿದ್ದಳು’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಎಂದಿನಂತೆ ಬುಧವಾರ ಬೆಳಿಗ್ಗೆಯೂ ಮಹಿಳೆಗೆ ಕರೆ ಮಾಡಿದ್ದ. ಆಗ ಗೆಳತಿ ಮನೆಗೆ ಬರುವಂತೆ ತಿಳಿಸಿದ ದೂರುದಾರರು, ಆತನ ವರ್ತನೆಯನ್ನು ಮೊಬೈಲ್ನಲ್ಲಿ ಸೆರೆ ಹಿಡಿಯಲು ಯೋಜನೆ ರೂಪಿಸಿದ್ದರು. ಮಧ್ಯಾಹ್ನ 3 ಗಂಟೆಗೆ ಆತ ಮನೆಗೆ ಬರುತ್ತಿದ್ದಂತೆಯೇ ದೂರುದಾರರ ಗೆಳತಿ ಅಂಗಡಿಗೆ ಹೋಗಿ ಬರುವುದಾಗಿ ಹೊರಟರು. ಮನೆಯಲ್ಲಿ ಒಬ್ಬರೇ ಇದ್ದ ಮಹಿಳೆ ಜತೆ ಆರೋಪಿ ಅನುಚಿತವಾಗಿ ವರ್ತಿಸಲು ಆರಂಭಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಇತ್ತ ಅಂಗಡಿಗೆ ಹೋಗುವುದಾಗಿ ಹೇಳಿದ್ದ ಗೆಳತಿ, ಕಿಟಕಿ ಮೂಲಕ ಮನೆಯೊಳಗಿನ ದೃಶ್ಯಗಳನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಆರೋಪಿ ಅತ್ಯಾಚಾರಕ್ಕೆ ಯತ್ನಿಸುವಾಗ ಮಹಿಳೆ ಚೀರಿದ್ದರಿಂದ ಆತ ಹೊರಟಿದ್ದಾನೆ. ನಂತರ ಆ ಮಹಿಳೆ, ಗೆಳತಿ ಜತೆ ಠಾಣೆಗೆ ಬಂದು ದೂರು ಕೊಟ್ಟಿದ್ದಾರೆ. ಅಲ್ಲದೇ, ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿರುವ ದೃಶ್ಯಗಳನ್ನೂ ವಶಕ್ಕೆ ಒಪ್ಪಿಸಿದ್ದಾರೆ. ಹೀಗಾಗಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.