ಭೋಪಾಲ್ (ಪಿಟಿಐ): ಅತ್ಯಾಚಾರ ಪ್ರಕರಣಗಳ ತಡೆಗೆ ಯಾವುದೇ ಸರ್ಕಾರ ಖಾತ್ರಿ ನೀಡಲು ಸಾಧ್ಯವಿಲ್ಲ. ಘಟನೆಯ ಬಳಿಕವಷ್ಟೇ ಕ್ರಮ ಜರುಗಿಸಬಹುದು ಎಂದು ಮಧ್ಯ ಪ್ರದೇಶದ ಗೃಹ ಸಚಿವ ಬಾಬುಲಾಲ್ ಗೌರ್ ಅವರು ಗುರುವಾರ ಇಲ್ಲಿ ಹೇಳಿಕೆ ನೀಡಿದರು.
ಅವರ ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಬಾಬುಲಾಲ್ ಅವರು ಹುದ್ದೆಯಲ್ಲಿ ಮುಂದುವರಿಯುವ ಹಕ್ಕು ಕಳೆದುಕೊಂಡಿದ್ದಾರೆ ಎಂದಿದೆ.
‘ಇದೊಂದು ಸಾಮಾಜಿಕ ಅಪರಾಧವಾಗಿದ್ದು, ಇದು ಪುರುಷ ಮತ್ತು ಮಹಿಳೆಯನ್ನು ಅವಲಂಬಿಸಿದೆ. ಕೆಲವು ಬಾರಿ ಇದು ಸರಿಯಾಗಿದ್ದರೆ ಕೆಲ ಸಲ ತಪ್ಪು ಆಗುತ್ತದೆ. ದೂರು ದಾಖಲಿಸದೇ ಇದ್ದರೆ ಏನೂ ಆಗುವುದಿಲ್ಲ’ ಎಂದು ಗೌರ್ ಹೇಳಿದರು.
ಮಹಿಳೆಯರು ಆತ್ಮ ರಕ್ಷಣೆಗೆ ಜೂಡೊ, ಕರಾಟೆ ಕಲಿಯಬೇಕು. ‘ವ್ಯಕ್ತಿಯೊಬ್ಬ ಬಯಸದ ಹೊರತು ಅವರನ್ನು ಮುಟ್ಟಲು ಯಾರು ಕೂಡ ಧೈರ್ಯ ತೋರುವುದಿಲ್ಲ. ಚಲನಚಿತ್ರಗಳ ಲ್ಲಿರುವ ಅಶ್ಲೀಲ ನೃತ್ಯ ವಾತಾವರಣವನ್ನು ಹಾಳು ಮಾಡುತ್ತಿದೆ’ ಎಂದು ಅವರು ಅಭಿಪ್ರಾಯಪಟ್ಟರು.
2007ರಲ್ಲಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ನ ಹೆಸರಾಂತ ನಟಿಯೊಬ್ಬರಿಗೆ ಹಾಲಿವುಡ್ ನಟರೊಬ್ಬರು ಮುತ್ತು ನೀಡಿದ್ದರು. ಆದರೆ, ಅದು ಅವರಿಗೆ ತಪ್ಪು ಎನಿಸಿರಲಿಲ್ಲ ಎಂದೂ ಘಟನೆಯನ್ನು ಉಲ್ಲೇಖಿಸಿದರು.
ಸಚಿವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ಮನಕ್ ಅಗರವಾಲ್, ಸಚಿವರು ಅವರ ಹುದ್ದೆಯಲ್ಲಿ ಮುಂದುವರಿಯುವ ಹಕ್ಕು ಕಳೆದುಕೊಂಡಿದ್ದಾರೆ ಎಂದರು.
ಸಚಿವರ ಈ ಹೇಳಿಕೆಯಿಂದ ಅತ್ಯಾಚಾರಿಗಳಿಗೆ ಪ್ರೋತ್ಸಾಹ ನೀಡಿದಂತಾಗಿದೆ. ಸಚಿವರ ಕರ್ತವ್ಯ ಮಹಿಳೆಯರಿಗೆ ರಕ್ಷಣೆ ಒದಗಿಸುವುದೇ ಹೊರತು ಅತ್ಯಾಚಾರಿಗಳಿಗಲ್ಲ ಎಂದಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಬೆಂಬಲಕ್ಕೆ ಬಂದಿರುವ ಸಚಿವರು, ‘ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ತಡೆಯಲು ಅವರಿಂದ ಸಾಧ್ಯವಿಲ್ಲ’ ಎಂದು ಹೇಳಿದರು.
ಬದಾಯೂಂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶ ಸರ್ಕಾರ ವ್ಯಾಪಕ ಟೀಕೆಗೆ ಗುರಿಯಾಗಿರುವುದನ್ನು ಉಲ್ಲೇಖಿಸಿ ಸಚಿವರು ಹೀಗೆ ಹೇಳಿದರು.
ಸಚಿವರ ಹೇಳಿಕೆಯಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆ. ಇದು ಅವರ ವೈಯಕ್ತಿಯ ನಿಲುವು ಎಂದು ಪಕ್ಷದ ನಾಯಕಿ ಲಲಿತಾ ಕುಮಾರಮಂಗಲಂ ಹೇಳಿದ್ದಾರೆ.