ಸ್ತ್ರೀವಾದವು ತನ್ನದೇ ಆದಂತಹ ಏಳುಬೀಳುಗಳನ್ನು ಎದುರಿಸುವುದರೊಂದಿಗೆ ‘ಜಗತ್ತು ಎಲ್ಲರಿಗೂ ಸಮಾನತೆ ಮತ್ತು ಸ್ವಾತಂತ್ರ್ಯದಿಂದ ಬದುಕಲು ಮುಕ್ತ ಅವಕಾಶಗಳನ್ನು ನೀಡಿದೆ. ನಾವು ಅದನ್ನು ಅರ್ಥಮಾಡಿಕೊಂಡು ಸಮಾನತೆಯ ನೆಲೆಯಿಂದ ಸಮಾಜವನ್ನು ರೂಪಿಸಿಕೊಳ್ಳಬೇಕು’ ಎಂಬ ತಾತ್ವಿಕತೆಯ ಆಧಾರದ ಮೇಲೆ ಕಾಲದಿಂದ ಕಾಲಕ್ಕೆ ಸ್ತ್ರೀಪರವಾದ ಧೋರಣೆಗಳಿಗೆ ತೆರೆದು ಕೊಳ್ಳುವಂತೆ ಆಳುವವರನ್ನು ಬರವಣಿಗೆ, ಹೋರಾಟ, ಚಳವಳಿ ಮುಂತಾದ ಮಾಧ್ಯಮಗಳ ಮೂಲಕ ಒತ್ತಾಯಿಸುತ್ತಲೇ ಬಂದಿದೆ.
ಹಲವಾರು ವರ್ಷಗಳ ನಿರಂತರವಾದ ಈ ಪ್ರಯತ್ನಗಳ ಹೊರತಾಗಿಯೂ ಪ್ರಸ್ತುತ ದೇಶದಲ್ಲಿ ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯು-ತ್ತಿರುವ ಅತ್ಯಾಚಾರ ಪ್ರಕರಣಗಳು ಸರ್ಕಾರವು ಸ್ತ್ರೀಪರವಾದ ನೀತಿಗಳನ್ನು ತನ್ನ ಆಲೋಚನೆಯ ಭಾಗವಾಗಿ ಒಪ್ಪಿಕೊಳ್ಳುವಲ್ಲಿ ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಇದುವರೆಗೂ ತೋರಿಸುತ್ತಿರುವ ನಿರ್ಲಕ್ಷ್ಯವನ್ನು ಬಯಲು ಮಾಡಿವೆ.
ಹಾಗೆ ನೋಡಿದರೆ ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ಈ ದೌರ್ಜನ್ಯ, ಶತಮಾನಗಳ ಕಾಲ ಪ್ರಭುತ್ವವು ಮಹಿಳಾಪರವಾದ ತನ್ನ ಧೋರಣೆಗಳನ್ನು ತನ್ನ ನೀತಿ ನಿರೂಪಣೆಗಳಲ್ಲಿ ಮುಕ್ತವಾಗಿ ಒಪ್ಪಿಕೊಳ್ಳದಿರುವುದರ ಫಲಿತಾಂಶವೇ ಆಗಿದೆ. ಸಮಕಾಲೀನ ಸಂದರ್ಭದಲ್ಲಿ ಸರ್ಕಾರದ ನೀತಿಗಳ ಹಿಂದಿರುವ ಈ ಪುರುಷತ್ವದ ಮನೋಭಾವವನ್ನು ಪ್ರಶ್ನಿಸಬೇಕಾದ, ಪ್ರಭುತ್ವವನ್ನು ಹೆಚ್ಚು ಹೆಚ್ಚು ಸ್ತ್ರೀಪರವಾದ ನೀತಿಗಳಿಗೆ ತೆರೆದುಕೊಳ್ಳುವಂತೆ ಒತ್ತಾಯಿಸಬೇಕಾಗಿದ್ದ ಹೋರಾಟ ಮತ್ತು ಚರ್ಚೆಗಳು ಅತ್ಯಾಚಾರದಂತಹ ನೀಚ ಕೃತ್ಯವೆಸಗಿದ ಅತ್ಯಾಚಾರಿಯನ್ನು ಕಾನೂನು ಯಾವ ಮಾದರಿಯ ಕ್ರೂರ ಶಿಕ್ಷೆಗೆ ಒಳಪಡಿಸಬೇಕು, ಅತ್ಯಾಚಾರಿಗೆ ವಿಧಿಸುವ ಶಿಕ್ಷೆಯನ್ನು ಇನ್ನಷ್ಟು ಕ್ರೂರಗೊಳಿಸುವ ನಿಟ್ಟಿನಲ್ಲಿ ಕಾನೂನುಗಳಿಗೆ ಯಾವ ಯಾವ ತಿದ್ದುಪಡಿ ತರಬೇಕು ಎಂಬ ಮಾದರಿಯ ಸಂಕುಚಿತ ಚರ್ಚೆಗಳಾಗಿ ಬದಲಾಗಿಬಿಟ್ಟಿವೆ. ಆ ಮೂಲಕ ಹೆಣ್ಣಿನ ಮೇಲಿನ ಅತ್ಯಾಚಾರವನ್ನು ಕೇವಲ ಪರಿಣಾಮಕಾರಿ ಕಾಯ್ದೆ ಇಲ್ಲದಿರುವುದರಿಂದ ಉದ್ಭವಿಸಿರುವ ಸಮಸ್ಯೆ ಎಂದು ತೀರ ಸರಳೀಕರಿಸಿ ವಿಶ್ಲೇಷಿಸಿಬಿಟ್ಟಿವೆ.
ಆದರೆ ಖಂಡಿತವಾಗಿ ವಾಸ್ತವ ಅದಲ್ಲ! ದಿನದಿಂದ ದಿನಕ್ಕೆ ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಮುಖ್ಯ ಕಾರಣ, ನಮ್ಮನ್ನು ಆಳುವ ಸರ್ಕಾರವು ಸ್ತ್ರೀ ಸಂವೇದನೆಯನ್ನು ಹೊಂದಿಲ್ಲದಿರುವುದೇ ಆಗಿದೆ. ಮಹಿಳಾ ಶೋಷಣೆಯನ್ನು ಒಂದು ಕಾನೂನು ಸಮಸ್ಯೆ ಎನ್ನುವ ಮಾದರಿಯ ವಿಶ್ಲೇಷಣೆ ಮಾಡುವುದರ ಮೂಲಕ, ಮಹಿಳಾ ಸುರಕ್ಷತೆ ಮತ್ತು ಸಬಲೀಕರಣದ ಕುರಿತಾದ ಸರ್ಕಾರದ ಇದುವರೆಗಿನ ಧೋರಣೆಗಳನ್ನು ಪ್ರಶ್ನಿಸುವ ಅವಕಾಶವನ್ನು ನಾವೂ ಕಳೆದುಕೊಳ್ಳುತ್ತಿದ್ದೇವೆ.
ಹಾಗಾದರೆ ಇಲ್ಲಿ ಏಳುವ ಮುಖ್ಯ ಪ್ರಶ್ನೆ, ಮಹಿಳೆ ಕೂಡ ಏಕೆ ಇಷ್ಟು ಸಂಕುಚಿತವಾಗಿ ಯೋಚಿಸುತ್ತಿದ್ದಾಳೆ? ತನ್ನ ಮೇಲಿನ ದೌರ್ಜನ್ಯಗಳಿಗೆ ಒಂದು ಶಾಶ್ವತ ಪರಿಹಾರವನ್ನು ಒದಗಿಸುವ ಪರ್ಯಾಯಗಳ ಕುರಿತು ಏಕೆ ಯೋಚಿಸುತ್ತಿಲ್ಲ? ಎಂದು ನೋಡಿದರೆ ಹಿಂದಿನಿಂದಲೂ ನಮ್ಮ ವ್ಯವಸ್ಥೆ ಮಹಿಳೆಯರನ್ನು ಸ್ವತಂತ್ರ ವ್ಯಕ್ತಿಯಾಗಿ ಗುರುತಿಸದೆ ಪುರುಷತ್ವಕ್ಕೆ ಪೂರಕವಾಗುವ ತಾಯಿ, ಪತ್ನಿ, ವೇಶ್ಯೆ ಇನ್ನಿತರ ಸಿದ್ಧಮಾದರಿಯಲ್ಲಿ ಗುರುತಿಸಿದೆ.
ಜೊತೆಗೆ ನಾವು ಕಟ್ಟಿಕೊಂಡ ಪ್ರಭುತ್ವವು ಸ್ತ್ರೀಯ ಬೆಳವಣಿಗೆ, ಅವಳಿಗೆ ನೀಡುವ ಶಿಕ್ಷಣ, ಅವಳನ್ನು ಬೆಳೆಸುವ ಸಾಮಾಜಿಕ ಪರಿಸ್ಥಿತಿ ಎಲ್ಲವೂ ಆಕೆಯನ್ನು ಒಂದು ಪೂರ್ವನಿರ್ಧರಿತ ಚೌಕಟ್ಟಿನಲ್ಲಿ ವಿವರಿಸಿ ಮಹಿಳೆಯೇ ತನ್ನ ಪರಾಧೀನ ಸ್ಥಿತಿಯನ್ನು ಒಪ್ಪಿಕೊಳ್ಳುವಂತೆ ಮಾಡಿಬಿಟ್ಟಿವೆ ಎಂಬ ವಿಶ್ಲೇಷಣೆಯನ್ನು ಮಹಿಳಾ ಅಧ್ಯಯನಗಳು ಸಮರ್ಥವಾಗಿ ನಮ್ಮ ಮುಂದಿಡುತ್ತವೆ. ಆದ್ದರಿಂದ ೨೧ನೇ ಶತಮಾನದಲ್ಲಿ ನಿಂತು ಯೋಚಿಸುತ್ತಿರುವ ನಾವು ಇನ್ನಾದರೂ ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಮುಖ್ಯ ಕಾರಣ ಅವರನ್ನು ಕುರಿತು ಪ್ರಭುತ್ವ ಹೊಂದಿರುವ ಧೋರಣೆಗಳು ಎಂಬುದನ್ನು ಅರ್ಥಮಾಡಿಕೊಂಡು, ಪ್ರಭುತ್ವವು ಹೆಚ್ಚು ಹೆಚ್ಚು ಮಹಿಳಾ ನೆಲೆಯನ್ನು ಒಳಗೊಂಡು ಆಲೋಚಿಸುವಂತೆ ಒತ್ತಾಯಿಸಬೇಕು.
ಮಹಿಳಾ ಸುರಕ್ಷತೆ, ಆಕೆಯ ಸಬಲೀಕರಣಗಳನ್ನು ಪ್ರಭುತ್ವ ಕೈಗೊಳ್ಳುವ ನೀತಿಯ ಮುಖ್ಯ ಆದ್ಯತೆಯಾಗಿಸುವ ವಾದಗಳನ್ನು ಕಟ್ಟಬೇಕಿದೆ. ಏಕೆಂದರೆ ದೆಹಲಿಯಲ್ಲಿ ಪ್ಯಾರಾ ಮೆಡಿಕಲ್ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ನಂತರ ತಿದ್ದುಪಡಿಗೊಳಗಾದ ಕಾನೂನು ಜಾರಿಯಲ್ಲಿ ಇದ್ದರೂ ಸಹ ಆತ್ಯಚಾರದಂತದಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚು ವರದಿಯಾಗುತ್ತಿರುವುದು ಕಠಿಣ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಈ ಘಟನೆಗಳನ್ನು ತಡೆಯಬಹುದು ಎಂಬ ಮಿಥ್ಯೆಯನ್ನು ಒಡೆದುಹಾಕಿದೆ.
ಆದ್ದರಿಂದ ಇಂದು ನಮಗೆ ಬೇಕಿರುವುದು ಮಹಿಳೆಯನ್ನು ಕುರಿತಾದ ಪ್ರಭುತ್ವದ ಮನಸ್ಥಿತಿಯಲ್ಲಿ ಬದಲಾವಣೆಯೇ ಹೊರತು ಪ್ರಕರಣದ ನಂತರ ಸುರಿಸುವ ಕಣ್ಣೀರು ಅಥವಾ ಭಾವನಾತ್ಮಕ ಮಾತುಗಳಲ್ಲ. ಇನ್ನು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಲು ಶಿಕ್ಷಣ ಇಲಾಖೆ ಹದಿಹರೆಯದವರಿಗೆ ಲೈಂಗಿಕತೆಯ ಕುರಿತ ನೈತಿಕತೆಯನ್ನು ಪಠ್ಯದ ಭಾಗವಾಗಿಸಬೇಕು ಮತ್ತು ಅದನ್ನು ಬೋಧಿಸಲು ನುರಿತ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು. ಮಕ್ಕಳಿಗೆ ಸಲಹೆ, ಸೂಚನೆ ನೀಡುವ ಆಪ್ತ ಸಲಹೆಗಾರ ರನ್ನು ಪ್ರತಿಯೊಂದು ಶಾಲೆಯಲ್ಲಿ ನೇಮಿಸಿ ಕೊಳ್ಳ ಬೇಕಿದೆ.
ಏಕೆಂದರೆ ಘಟನೆ ಆದ ನಂತರ ನಾವು ಕಾರ್ಯ ಪ್ರವೃತ್ತರಾಗುವುದಕ್ಕಿಂತ ಘಟನೆ ನಡೆಯದ ಹಾಗೆ ನೋಡಿಕೊಳ್ಳುವುದು ಅಥವಾ ವ್ಯಕ್ತಿ ಆ ಮಾದರಿಯ ಘಟನೆಗಳನ್ನು ಮಾಡ ದಂತೆ ಅವನನ್ನು ಶಿಕ್ಷಿತನನ್ನಾಗಿಸುವುದು ಮುಖ್ಯ ವಾಗುತ್ತದೆ. ‘ಶಿಕ್ಷಣ’, ‘ಶಿಕ್ಷೆ’ಗಿಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬ ಸತ್ಯವನ್ನು ಇತಿಹಾಸ ಹಲವು ಸಂದರ್ಭಗಳಲ್ಲಿ ನಿರೂಪಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.