ನವದೆಹಲಿ (ಪಿಟಿಐ): ಮಹಿಳೆಯ ಮೇಲೆ ಅತ್ಯಾಚಾರ ಹಾಗೂ ಬೆದರಿಕೆ ಆರೋಪದ ಮೇಲೆ ಬಂಧಿತನಾಗಿದ್ದ ಹರಿಯಾಣ ಮೂಲದ ವ್ಯಕ್ತಿಯನ್ನು ದೆಹಲಿ ನ್ಯಾಯಾಲಯ ಶುಕ್ರವಾರ ಖುಲಾಸೆ ಮಾಡಿದೆ.
‘ಪತಿ ಹಾಗೂ ಮಾವನ ಒತ್ತಾಯದಿಂದ ಆತನ ವಿರುದ್ಧ ಪ್ರಕರಣ ದಾಖಲಿಸಿದೆ’ ಎಂದು ಮಹಿಳೆ ನ್ಯಾಯಾಲಯಕ್ಕೆ ತಿಳಿಸಿದ್ದರಿಂದ ಆರೋಪಿಯನ್ನು ಬಿಡುಗಡೆ ಮಾಡಲಾಗಿದೆ.
‘ಆಕೆ ಇಚ್ಛಾಪೂರ್ವಕವಾಗಿ ಆತನೊಂದಿಗೆ ದೈಹಿಕ ಸಂಬಂಧ ಹೊಂದಿದ್ದಳು’ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವೀರೇಂದರ್ ಭಟ್ ತಿಳಿಸಿದ್ದಾರೆ.
‘ಆರೋಪಿಗೆ ವಿರುದ್ಧವಾಗುವಂತಹ ಯಾವುದೇ ವಿಷಯವೂ ಮಹಿಳೆಯ ಹೇಳಿಕೆಯಲ್ಲಿ ಕಂಡುಬಂದಿಲ್ಲ’ ಎಂದೂ ಅವರು ಹೇಳಿದ್ದಾರೆ. ‘ಬಾಡಿಗೆ ಮನೆಯಲ್ಲಿರುವ ವ್ಯಕ್ತಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಬಳಿಕ ಆತ ನನ್ನ ನಗ್ನ ಚಿತ್ರಗಳನ್ನು ತೋರಿಸಿ ಹಣಕ್ಕಾಗಿ ಬೆದರಿಸುತ್ತಿದ್ದ’ ಎಂದು ಮಹಿಳೆ ದೂರು ನೀಡಿದ್ದಳು. ಈ ಹಿನ್ನೆಲೆಯಲ್ಲಿ 2013 ಅಕ್ಟೋಬರ್ 26ರಂದು ಆತನನ್ನು ಬಂಧಿಸಲಾಗಿತ್ತು..