ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕೌನ್ಸಿಲ್ ಸಭೆ ಬುಧವಾರ ನಡೆಯಲಿದ್ದು, ಹಿಂದಿನ ಸಭೆಯಲ್ಲಿ ನಡೆದ ಚರ್ಚೆ ಹಾಗೂ ಕೈಗೊಂಡ ನಿರ್ಣಯಗಳ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯ ಪಾಲನಾ ವರದಿಯನ್ನು (ಎಟಿಆರ್) ಮಂಡಿಸುವ ಹೊಸ ಸಂಪ್ರದಾಯಕ್ಕೆ ಸಾಕ್ಷಿಯಾಗಲಿದೆ.
ಕಾರ್ಯ ಜರುಗಿಸಿದ ವರದಿ ಮಂಡಿಸಲು ಎಲ್ಲ ಅಧಿಕಾರಿಗಳು ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಕೌನ್ಸಿಲ್ ಸಭೆಯಲ್ಲಿ ನೀಡಬೇಕಾದ ಉತ್ತರಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆಯನ್ನೂ ನಡೆಸಲಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಬಿಬಿಎಂಪಿ ಆಯುಕ್ತ ಎಂ. ಲಕ್ಷ್ಮೀನಾರಾಯಣ ಅವರು ಈಗಾಗಲೇ ಕಳೆದ ತಿಂಗಳ ಸಭೆಯ ನಡಾವಳಿಯನ್ನು ತರಿಸಿಕೊಂಡಿದ್ದಾರೆ. ಚರ್ಚೆಯಾದ ವಿಷಯಗಳಿಗೆ ಸಂಬಂಧಿಸಿದಂತೆ ಉತ್ತರ ನೀಡಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಆ ಮೂಲಗಳು ಸ್ಪಷ್ಟಪಡಿಸಿವೆ.
ಬಿಬಿಎಂಪಿ ಆಡಳಿತ ಪಕ್ಷದ ನಾಯಕರಾಗಿ ಕಳೆದ ತಿಂಗಳು ಅಧಿಕಾರ ಸ್ವೀಕರಿಸಿದ ಎನ್.ಆರ್.ರಮೇಶ್, ‘ಪ್ರತಿ ಕೌನ್ಸಿಲ್ ಸಭೆಯಲ್ಲಿ ಸದಸ್ಯರು ನಿರ್ಣಯ ಕೈಗೊಳ್ಳುತ್ತಾರೆ. ಆದರೆ, ಅಧಿಕಾರಿಗಳು ಅದನ್ನು ಇಲ್ಲಿಯೇ ಮರೆತು ಹೋಗುತ್ತಾರೆ. ಈ ಸಭೆಯಲ್ಲಿ ನಡೆದ ಚರ್ಚೆ ಹಾಗೂ ಕೈಗೊಂಡ ನಿರ್ಣಯಗಳ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳು ಮುಂದಿನ ಸಭೆಯಲ್ಲಿ ವರದಿ ಮಂಡಿಸಬೇಕು’ ಎಂದು ಹೇಳಿದ್ದರು. ಈ ಸಂಬಂಧ ನಿರ್ಣಯವನ್ನೂ ಕೈಗೊಳ್ಳಲಾಗಿತ್ತು.
‘ಸಭೆಯಲ್ಲಿ ಪ್ರಸ್ತಾಪವಾದ ಯಾವುದೇ ವಿಷಯಕ್ಕೆ ತಕ್ಕ ಪರಿಹಾರ ಸಿಗಬೇಕು ಎನ್ನುವ ಉದ್ದೇಶದಿಂದ ಈ ಪದ್ಧತಿ ಜಾರಿಗೆ ತರಲಾಗುತ್ತಿದೆ’ ಎಂದು ರಮೇಶ್ ತಿಳಿಸಿದರು.
ಮತ್ತೆ ಚರ್ಚೆಗೆ: ಬಿಬಿಎಂಪಿ ವ್ಯಾಪ್ತಿಯಲ್ಲಿ 2015ರ ಏಪ್ರಿಲ್ ಒಂದರಿಂದ ಜಾರಿಗೆ ಬರುವಂತೆ ಆಸ್ತಿ ತೆರಿಗೆ ಹೆಚ್ಚಳ ಮಾಡಬೇಕು ಎನ್ನುವ ಪ್ರಸ್ತಾವ ಬುಧವಾರ ನಡೆಯಲಿರುವ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಮತ್ತೆ ಚರ್ಚೆಗೆ ಬರಲಿದೆ.
ಹಣಕಾಸಿನ ಮುಗ್ಗಟ್ಟಿನಿಂದ ಹೊರಬರಲು ಆಸ್ತಿ ತೆರಿಗೆ ಹೆಚ್ಚಳ ಮಾಡುವುದು ಅನಿವಾರ್ಯವಾಗಿದ್ದು, ವಸತಿ ಕಟ್ಟಡಗಳಿಗೆ ಶೇ 20 ಮತ್ತು ವಾಣಿಜ್ಯ ಕಟ್ಟಡಗಳಿಗೆ ಶೇ 25ರಷ್ಟು ಆಸ್ತಿ ತೆರಿಗೆ ಏರಿಕೆ ಮಾಡಬೇಕು ಎಂಬ ಪ್ರಸ್ತಾವವನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಸಭೆ ಮುಂದಿಟ್ಟಿದೆ.
ಮಹಾಲೇಖಪಾಲರು ಮತ್ತು ಲೆಕ್ಕ ಪರಿಶೋಧಕರು (ಸಿಎಜಿ) ಕಳೆದ ಐದು ವರ್ಷಗಳಿಂದ ತೆರಿಗೆ ಹೆಚ್ಚಳವನ್ನು ಏಕೆ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ತೆರಿಗೆ ಹೆಚ್ಚಳದ ವಿಷಯ ಈ ಹಿಂದಿನ ಕೌನ್ಸಿಲ್ ಸಭೆಗಳಲ್ಲಿ ಎರಡು ಸಲ ಬಂದಿದ್ದರೂ ಯಾವುದೇ ನಿರ್ಣಯ ಕೈಗೊಳ್ಳದೆ ಪ್ರಸ್ತಾವವನ್ನು ಮುಂದೂಡಲಾಗಿದೆ.
‘ಕರ್ನಾಟಕ ಮುನ್ಸಿಪಲ್ ಕಾರ್ಪೊರೇಶನ್ (ಕೆಎಂಸಿ) ಕಾಯ್ದೆ ಪ್ರಕಾರ, ಮೂರು ವರ್ಷದಲ್ಲಿ ಒಂದು ಸಲ ಕನಿಷ್ಠ ಶೇ 15 ಮತ್ತು ಗರಿಷ್ಠ 30ರಷ್ಟು ತೆರಿಗೆ ಹೆಚ್ಚಿಸುವುದು ಕಡ್ಡಾಯವಾಗಿದೆ. ಈ ಹಿಂದೆ 2008ರಲ್ಲಿ ಆಸ್ತಿ ತೆರಿಗೆ ದರವನ್ನು ಪರಿಷ್ಕರಣೆ ಮಾಡಲಾಗಿತ್ತು. ಈಗ ತೆರಿಗೆ ಹೆಚ್ಚಳ ಅನಿವಾರ್ಯವಾಗಿದೆ’ ಎಂದು ಪ್ರಸ್ತಾವದಲ್ಲಿ ತಿಳಿಸಲಾಗಿದೆ.
ಬಿಬಿಎಂಪಿ ಕೌನ್ಸಿಲ್ ಅವಧಿ 2015ರ ಏಪ್ರಿಲ್ಗೆ ಕೊನೆಗೊಳ್ಳಲಿದ್ದು, ಚುನಾವಣೆ ವರ್ಷದಲ್ಲಿ ತೆರಿಗೆ ಏರಿಕೆ ಯಾವ ಸದಸ್ಯರಿಗೂ ಬೇಕಿಲ್ಲ. ಬೆಂಗಳೂರು ಜಲಮಂಡಳಿ ದರ ಪರಿಷ್ಕರಣೆ ಮಾಡಿದಾಗ ಬಿಜೆಪಿ ಸದಸ್ಯರೇ ಪ್ರತಿಭಟನೆ ನಡೆಸಿದ್ದರು.
ತೆರಿಗೆ ಹೆಚ್ಚಳ ಚರ್ಚೆ
ಬಿಬಿಎಂಪಿ ವ್ಯಾಪ್ತಿಯಲ್ಲಿ 2015ರ ಏಪ್ರಿಲ್ ಒಂದರಿಂದ ಜಾರಿಗೆ ಬರುವಂತೆ ಆಸ್ತಿ ತೆರಿಗೆ ಹೆಚ್ಚಳ ಮಾಡಬೇಕು ಎನ್ನುವ ಪ್ರಸ್ತಾವ ಬುಧವಾರ ನಡೆಯಲಿರುವ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಮತ್ತೆ ಚರ್ಚೆಗೆ ಬರಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.