ಬೆಂಗಳೂರು: ನಗರದ ತ್ಯಾಜ್ಯವನ್ನು ಮಂಡೂರಿಗೆ ಹಾಕುವುದನ್ನು ಸ್ಥಗಿತಗೊಳಿಸಿದ ನಂತರದ ಬೆಳವಣಿಗೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಳೀಯ ಜನಪ್ರತಿನಿಧಿಗಳು, ಬಿಬಿಪಿಎಂ ಮೇಯರ್, ಅಧಿಕಾರಿಗಳೊಂದಿಗೆ ಶನಿವಾರ ಚರ್ಚೆ ನಡೆಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಮಂಡೂರಿನಲ್ಲಿ ಕಸ ಹಾಕುವುದನ್ನು ನಿಲ್ಲಿಸಿದ ಬಳಿಕ ತ್ಯಾಜ್ಯ ವಿಲೇವಾರಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದ ಅವರು, ಮುಂದೆ ಯಾವುದೇ ಕಾರಣಕ್ಕೂ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ಮಂಡೂರು ಜನರಿಗೆ ಕೊಟ್ಟ ಮಾತಿನಂತೆ ನಾವು ನಡೆದುಕೊಂಡಿದ್ದೇವೆ. ಬಿಜೆಪಿಯವರು ಬೆಂಗಳೂರನ್ನು ಗೊಬ್ಬರ ಮಾಡಿದ್ದರು. ನಾವು ಅದನ್ನು ಸರಿ ಮಾಡುತ್ತಿದ್ದೇವೆ. ಮುಂದಿನ ಆರು ತಿಂಗಳಲ್ಲಿ ಎಲ್ಲ ಸಮಸ್ಯೆ ಬಗೆಹರಿಯಲಿದೆ’ ಎಂದರು.
‘ನೆಲಸಮಗೊಳಿಸಿದ ಕಟ್ಟಡಗಳ ಅವಶೇಷಗಳನ್ನು ಕಲ್ಲು ಕ್ವಾರಿಗಳಿಗೆ ತುಂಬಲು ಕ್ರಮ ಕೈಗೊಳ್ಳಲಾಗಿದೆ. ಹೋಟೆಲ್ ಮತ್ತು ಮಾಲ್ಗಳಲ್ಲಿ ಸಂಗ್ರಹವಾಗುತ್ತಿರುವ ತ್ಯಾಜ್ಯದ ಸಂಸ್ಕರಣೆಗೆ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ತ್ಯಾಜ್ಯ ಸಂಗ್ರಹ ಪ್ರಮಾಣ 3 ಸಾವರಿ ಟನ್ಗೆ ಇಳಿದಿದೆ’ ಎಂದು ಅವರು ಹೇಳಿದರು.
ಮಾಗಡಿ ತಾಲ್ಲೂಕಿನ ಗೋರೂರು ಬಳಿ ಸಾವಿರ ಟನ್ ಸಾಮರ್ಥ್ಯದ ಕಸ ಸಂಸ್ಕರಣಾ ಘಟಕ ಸ್ಥಾಪಿಸಲು ‘ಎಸ್ಇಟಿಎಆರ್ಎಎಂ’ ಕಂಪೆನಿ ಮುಂದೆ ಬಂದಿದೆ. ಅತ್ಯಂತ ವೈಜ್ಞಾನಿಕವಾಗಿ ಇಲ್ಲಿ ಕಸ ಸಂಸ್ಕರಣೆಯಾಗಲಿದ್ದು, ಪರಿಸರಕ್ಕೆ ತೊಂದರೆಯಾಗದು. ಆದರೆ, ಇದಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ. ಮಾತುಕತೆ ಮೂಲಕ ಮನ ಒಲಿಸಲಾಗುವುದು ಎಂದರು.
ವರದಿ ನಂತರ ನಿರ್ಧಾರ: ಬಿಬಿಎಂಪಿ ವಿಭಜನೆಯ ಕುರಿತಂತೆ ರಚಿಸಿರುವ ಸಮಿತಿ ವರದಿ ನೀಡಿದ ನಂತರ ಪಾಲಿಕೆ ಚುನಾವಣೆ ಬಗ್ಗೆ ನಿರ್ಧರಿಸಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.