ಕೊಪ್ಪಳ: ‘ವಿ.ಶ್ರೀನಿವಾಸ್ ಪ್ರಸಾದ್ ಅವರು ಹಿರಿಯರು. ಅವರು ಅಧಿಕಾರ ವ್ಯಾಮೋಹ ಬಿಟ್ಟು ಎಲ್ಲರಿಗೂ ಅವಕಾಶ ಮಾಡಿಕೊಡಬೇಕು’ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ವಾಗ್ದಾಳಿ ನಡೆಸಿದರು.
ಯಲಬುರ್ಗಿಯಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಶ್ರೀನಿವಾಸ್ ಪ್ರಸಾದ್ ಪ್ರಬುದ್ಧರು. ನಾನು ಸಹ ಅವರಿಗಿಂತ ಹೆಚ್ಚು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಾವೂ 3 ವರ್ಷ ಅಧಿಕಾರ ಇಲ್ಲದೆ ಸುಮ್ಮನಿದ್ದೆವು ಎಂಬುವುದನ್ನು ಅವರು ಗಮನಿಸಬೇಕು’ ಎಂದರು.
‘ಎಲ್ಲರಿಗೂ ಸಚಿವ ಸ್ಥಾನ ಕೊಡಲು ಸಾಧ್ಯವಿಲ್ಲ. ಅದನ್ನು ಶ್ರೀನಿವಾಸ್ ಪ್ರಸಾದ್ ಅರ್ಥ ಮಾಡಿಕೊಳ್ಳಬೇಕು. ಸಚಿವ ಸಂಪುಟ ಪುನರ್ರಚನೆ ಬಳಿಕ ಉಂಟಾಗಿರುವ ಭಿನ್ನಮತ ಶೀಘ್ರ ಶಮನವಾಗಲಿದೆ’ ಎಂದು ಹೇಳಿದರು.
ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಇದೇ 30ರಂದು ಸಭೆ ನಡೆಸಿ ಚರ್ಚಿಸಲಾಗುವುದು ಎಂದರು.