ನವದೆಹಲಿ(ಪಿಟಿಐ): ಈ ಬಾರಿಯ ಚಳಿಗಾಲದ ಅಧಿವೇಶನ ಸೋಮವಾರ ಆರಂಭವಾಗಲಿದ್ದು, ಇದರತ್ತ ಷೇರುಪೇಟೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಆರ್ಥಿಕ ಸುಧಾ-ರಣಾ ಕ್ರಮಗಳು, ಸರಕು ಮತ್ತು ಸೇವಾ ತೆರಿಗೆ ಜಾರಿ, ಕಲ್ಲಿದ್ದಲು ವಲಯದ ಸುಧಾರಣೆ... ಹೀಗೆ ಹಲವು ವಿಷಯಗಳ ಬಗ್ಗೆ ಹೂಡಿಕೆ-ದಾರರು ಕುತೂಹಲ ತಳೆದಿದ್ದಾರೆ ಎಂದು ಮಾರುಕಟ್ಟೆ ಪರಿಣತರು ವಿಶ್ಲೇಷಿಸಿದ್ದಾರೆ.
ಷೇರುಪೇಟೆ ದಾಖಲೆ ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದು, ಈ ವಾರ ಚಳಿಗಾಲದ ಅಧಿವೇಶನದಲ್ಲಿನ ಪ್ರಮುಖ ನಿರ್ಧಾರಗಳ ಮೇಲೆ ವಹಿವಾಟಿನ ದಿಕ್ಕು ನಿರ್ಧಾರವಾಗಲಿದೆ. ಆದರೆ, ವಾಯಿದಾ ವಹಿವಾಟು ಅವಧಿ ಮುಕ್ತಾಯ ದಿನ ಮತ್ತು ದೇಶದ ಒಟ್ಟಾರೆ ಆಂತರಿಕ ಉತ್ಪನ್ನ (ಜಿಡಿಪಿ) ಅಂಕಿ–ಅಂಶ ಆಧರಿಸಿ ಹೂಡಿಕೆದಾರರು ಎಚ್ಚರಿಕೆಯ ವಹಿವಾಟಿಗೆ ಮುಂದಾಗಲಿದ್ದಾರೆ ಎನ್ನುವುದು ಪರಿಣಿತರ ಅಭಿಪ್ರಾಯ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮತ್ತು ಕಲ್ಲಿದ್ದಲು ವಲಯಕ್ಕೆ ಸಂಬಂಧಿಸಿದ ಮಸೂದೆಗಳ ತಿದ್ದುಪಡಿ ಮೇಲೆ ಹೂಡಿಕೆದಾರರ ಮುಂದಿನ ಚಟುವಟಿಕೆಗಳು ನಿರ್ಧಾರವಾಗಲಿವೆ. ಯೂರೋಪ್ ಆರ್ಥಿಕತೆಯ ಮಿಶ್ರ ಸ್ಥಿತಿಗತಿಯೂ ಮುಖ್ಯವಾಗಲಿದೆ ಎಂದು ಸಿಯಾನ್ಸ್ ಅನಲಿಟಿಕ್ಸ್ ಸಂಸ್ಥಾಪಕ ಅಮನ್ ಚೌಧರಿ ಅಭಿಪ್ರಾಯಪಟ್ಟಿದ್ದಾರೆ.
ನವೆಂಬರ್ 27ರಂದು ವಾಯಿದಾ ಕರಾರು ಅವಧಿ ಮುಕ್ತಾಯವಾಗ-ಲಿದ್ದು, ಪೇಟೆ ವಹಿವಾಟು ವಾರವಿಡೀ ಚಂಚಲತೆಯಿಂದ ಕೂಡಿರಲಿದೆ. ನವೆಂಬರ್ 28ರಂದು ಜಿಡಿಪಿ ಅಂಕಿ–ಅಂಶ ಹೊರಬೀಳಲಿದೆ. ಇವುಗಳ ಆಧಾರದ ಮೇಲೆ ಮುಂದಿನ ಷೇರುಪೇಟೆ ವಹಿವಾಟು ನಿರ್ಧಾರವಾಗಲಿದೆ.