ನವದೆಹಲಿ: ಸಾಬೂನು, ಶಾಂಪೂ, ಟೂತ್ಪೇಸ್ಟ್, ನೈರ್ಮಲ್ಯಕಾರಕಗಳು ಹಾಗೂ ಪ್ರಸಾಧನ ಸಾಮಗ್ರಿಗಳ ಮೇಲೆ ಸಸ್ಯಜನ್ಯವೇ ಅಥವಾ ಪ್ರಾಣಿಜನ್ಯವೇ ಎನ್ನುವುದನ್ನು ಸೂಚಿಸಲು ಕ್ರಮವಾಗಿ ಹಸಿರು ಹಾಗೂ ಕೆಂಪು/ ಕಂದು ಚುಕ್ಕೆಗಳನ್ನು ಇಡಬೇಕು ಎಂಬ ಕೇಂದ್ರ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸೌಂದರ್ಯ ವರ್ಧಕ ಉತ್ಪನ್ನ ತಯಾರಿಕಾ ಉದ್ದಿಮೆಗಳು ಕೋರ್ಟ್್ ಮೆಟ್ಟಿಲೇರಿವೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಒಂದು ತಿಂಗಳ ಅವಧಿಯೊಳಗೇ ಗ್ರಾಹಕ ವ್ಯವಹಾರಗಳ ಇಲಾಖೆ ಈ ಅಧಿಸೂಚನೆ ಹೊರಡಿಸಿತ್ತು.
ಇದನ್ನು ಪ್ರಶ್ನಿಸಿ ಇಂಡಿಯನ್್ ಬ್ಯೂಟಿ ಆಂಡ್್ ಹೈಜೀನ್್ ಅಸೋಸಿಯೇಷನ್್ (ಐಬಿಎಚ್ಎ) ಸೆ.೩ರಂದು ಬಾಂಬೆ ಹೈಕೋರ್ಟ್ನಲ್ಲಿ ದಾವೆ ಹೂಡಿದೆ. ಅಧಿಸೂಚನೆ ಜಾರಿಗೆ ಬಾಂಬೆ ಹೈಕೋರ್ಟ್್ ವಿಭಾಗೀಯ ಪೀಠ ತಡೆ ನೀಡಿದೆ.
‘ಪೂರ್ವ ಮಾಹಿತಿ ಇಲ್ಲದೆಯೇ ಈ ಅಧಿಸೂಚನೆ ಹೊರಡಿಸಲಾಗಿದೆ’ ಎಂದು ಐಬಿಎಚ್ಎ ಪ್ರಧಾನ ಕಾರ್ಯದರ್ಶಿ ಮಾಲತಿ ನಾರಾಯಣನ್್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಸ್ತುತ ಸೌಂದರ್ಯ ವರ್ಧಕ ಉತ್ಪನ್ನ ತಯಾರಿಕಾ ಉದ್ದಿಮೆಯು ವಾರ್ಷಿಕ ೬೦ ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದ್ದು, ಪ್ರತಿವರ್ಷ ಶೇ 20ರಷ್ಟು ಬೆಳವಣಿಗೆ ದಾಖಲಿಸುತ್ತಿದೆ.