ನವದೆಹಲಿ (ಪಿಟಿಐ): ಉತ್ತರಾಖಂಡದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಒಂಬತ್ತು ಮಂದಿ ಅನರ್ಹ ಶಾಸಕರಿಗೆ ‘ವೈ’ ಶ್ರೇಣಿಯ ಭದ್ರತೆ ಒದಗಿಸಲಾಗಿದೆ.
ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ವಿಜಯ್ ಬಹುಗುಣ ಸೇರಿದಂತೆ ಒಂಬತ್ತು ಮಂದಿ ಈಚೆಗೆ ಬಿಜೆಪಿ ಸೇರಿದ್ದರಿಂದ ಉತ್ತರಾಖಂಡದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿತ್ತು.
ಈ ಒಂಬತ್ತು ಮಂದಿಯನ್ನು ಈಗ ಗಣ್ಯ ವ್ಯಕ್ತಿಗಳ ಪಟ್ಟಿಯಲ್ಲಿ ಸೇರಿಸಿದ್ದು, ಇವರಿಗೆ ಅರೆ ಸೇನಾಪಡೆಯ ಸಶಸ್ತ್ರ ಕಮಾಂಡೋಗಳ ಮೂಲಕ
ರಕ್ಷಣೆ ಒದಗಿಸಲಾಗಿದೆ.
‘ವೈ’ ಶ್ರೇಣಿಯ ರಕ್ಷಣಾ ವ್ಯವಸ್ಥೆಯಲ್ಲಿ ವ್ಯಕ್ತಿಗೆ ಸ್ವಯಂಚಾಲಿತ ಶಸ್ತ್ರಗಳನ್ನು ಹೊಂದಿರುವ ಒಬ್ಬ ಕಮಾಂಡೊ ಸೇರಿದಂತೆ ಇಬ್ಬರು ರಕ್ಷಣಾ ಸಿಬ್ಬಂದಿಯನ್ನು ಮಾತ್ರ ನೀಡಲು ಅವಕಾಶ. ಆದರೆ ಈ ಶಾಸಕರ ಪ್ರಾಣಕ್ಕೆ ಅಪಾಯ ಸಂಭವಿಸುವ ಸಾಧ್ಯತೆ ಇರುವುದರಿಂದ ಇವರ ಮನೆಗಳಿಗೆ 24 ಗಂಟೆಯೂ ರಕ್ಷಣೆ ಒದಗಿಸಲು ಸೂಚನೆ ನೀಡಲಾಗಿದೆ.