21ನೇ ಶತಮಾನದ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿ ನಾವು ಬದುಕುತ್ತಿದ್ದರೂ ನಮ್ಮ ರಾಜ್ಯದಲ್ಲಿ ಭಂಗಿ ಪದ್ಧತಿ ಇನ್ನೂ ಜೀವಂತವಾಗಿದ್ದು, ದೇಶದಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ ಎಂಬ ವಿಷಯ ನಿಜಕ್ಕೂ ನಾಚಿಕೆಗೇಡಿನದು.
ತುತ್ತು ಅನ್ನ ಗಳಿಸಲು ಈ ಅಸಹ್ಯ ಕೆಲಸ ಮಾಡಲು ಹೋಗಿ ಎಷ್ಟೋ ಜಾಡಮಾಲಿಗಳು ವಿಷಾನಿಲದಿಂದ ಉಸಿರುಗಟ್ಟಿ ಸತ್ತಿದ್ದಾರೆ. 1993ರಲ್ಲೇ ‘ಸಫಾಯಿ ಕರ್ಮಚಾರಿಗಳ ಉದ್ಯೋಗ ಹಾಗೂ ಒಣಪಾಯಿಖಾನೆ ನಿಷೇಧ ಕಾಯ್ದೆ’ ಜಾರಿಗೆ ಬಂದಿದ್ದರೂ ಈಗಲೂ ಈ ಪದ್ಧತಿ ಜೀವಂತವಾಗಿದೆಯೆಂದರೆ ನಮ್ಮ ಸರ್ಕಾರಗಳ ಹಾಗೂ ನ್ಯಾಯಾಂಗ ವ್ಯವಸ್ಥೆಯ ಜಡತ್ವ ತಿಳಿಯುತ್ತದೆ.
ಈ ಅನಿಷ್ಟ ಕೆಲಸ ಮಾಡುತ್ತಿರುವವರು ದಲಿತರು ಹಾಗೂ ಹಿಂದುಳಿದವರು. ಇವರ ಮೇಲೆ ಸರ್ಕಾರದ ಕಾಳಜಿ ಎಷ್ಟಿದೆ ಎಂಬುದು ಸಹ ಗೊತ್ತಾಗುತ್ತದೆ. ಕೆಲ ವರ್ಷಗಳ ಹಿಂದೆ ಹಾವೇರಿ ಜಿಲ್ಲೆಯ ಸವಣೂರಿನ ಭಂಗಿ ಕುಟುಂಬ ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟಿಸಿದ ಘಟನೆ ಹಾಗೂ ಕೆಜಿಎಫ್ನ ದಲಿತರು ಮಾಡುವ ಭಂಗಿ ಕಾರ್ಯ ರಾಜ್ಯದಾದ್ಯಂತ ಸಂಚಲನ ಮೂಡಿಸಿದ್ದವು.
ಸಫಾಯಿ ಕರ್ಮಚಾರಿಗಳಿಗೆ ಪುನರ್ವಸತಿ ನೀಡಿ ರಾಜ್ಯವನ್ನು ಮಲ ಹೊರುವ ಕೆಲಸದಿಂದ ಮುಕ್ತಗೊಳಿಸಲಾಗಿದೆ ಎಂದು ಸುಳ್ಳು ಮಾಹಿತಿ ನೀಡಿದ್ದ ಹಿಂದಿನ ಸರ್ಕಾರವನ್ನು ನ್ಯಾ. ಜೆ.ಎಸ್.ಕೇಹರ್ ತರಾಟೆಗೆ ತೆಗೆದುಕೊಂಡಿದ್ದರು. ಇಷ್ಟಾದರೂ ಈ ಪದ್ಧತಿ ಇನ್ನೂ ಇದೆಯೆಂದರೆ, ನಿಜಕ್ಕೂ ನಾವು ಅನಾಗರಿಕ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದರ್ಥ. ಈಗಲಾದರೂ ಸರ್ಕಾರ ಜವಾಬ್ದಾರಿ ಪ್ರದರ್ಶಿಸಬೇಕಿದೆ.