ನವದೆಹಲಿ (ಪಿಟಿಐ): ದೇಶದಾದ್ಯಂತ ಸುಮಾರು 2.8 ಲಕ್ಷ ಗ್ರಾಹಕರು ಅಡುಗೆ ಅನಿಲ ಸಬ್ಸಿಡಿ ಹಿಂತಿರುಗಿಸುವ ನಿರ್ಧಾರ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇಲ್ಲಿ ನಡೆದ ‘ಉರ್ಜಾ ಸಂಗಮ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ನಿರ್ಧಾರದಿಂದ ಸರ್ಕಾರಕ್ಕೆ ನೂರು ಕೋಟಿ ರೂಪಾಯಿ ಉಳಿತಾಯ ಆಗಲಿದೆ. ಈ ಉಳಿತಾಯದ ಹಣವನ್ನು ಬಡವರ ಕಲ್ಯಾಣಕ್ಕೆ ಉಪಯೋಗಿಸಬಹುದಾಗಿದೆ ಎಂದರು.
ಇದನ್ನು ಪ್ರೇರಣೆಯಾಗಿಟ್ಟುಕೊಂಡು ಶ್ರೀಮಂತರು ತಾವು ಪಡೆಯುತ್ತಿರುವ ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ಹಿಂತಿರುಗಿಸಬೇಕು ಮತ್ತು ಇಂಧನ ಆಮದು ಮೇಲಿನ ಅವಲಂಬನೆಯನ್ನು 2022ರ ವೇಳೆಗೆ ಶೇಕಡ 10ರಷ್ಟು ಕಡಿಮೆ ಮಾಡಬೇಕು ಎಂದು ಪ್ರಧಾನಿ ಮೋದಿ ಮನವಿ ಮಾಡಿದರು.
‘ಜನ್–ಧನ್’ ಕಾರ್ಯಕ್ರಮದಡಿ 12 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಅಡುಗೆ ಅನಿಲ ಸಬ್ಸಿಡಿ ಹಣ ನೇರವಾಗಿ ವರ್ಗಾವಣೆ ಮಾಡಲು ಈ ಖಾತೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು. ಸಾಂಸ್ಥಿಕ, ಪಾರದರ್ಶಕ ಮತ್ತು ನೀತಿ ಚಾಲಿತ ವ್ಯವಸ್ಥೆಯ ಮೂಲಕ ಭ್ರಷ್ಟಾಚಾರ ತಡೆಗೆ ಪ್ರಯತ್ನಿಸಿದರೆ ಸೋರಿಕೆ ಆಗುವುದನ್ನು ತಪ್ಪಿಸಬಹುದಾಗಿದೆ. ನೇರ ನಗದು ವರ್ಗಾವಣೆಯಿಂದ ಇದು ಸ್ಪಷ್ಟವಾಗಿದೆ ಎಂದರು.
ಭಾರತ ಶೇ 77ರಷ್ಟು ಇಂಧನ ಆಮದು ಮಾಡಿಕೊಳ್ಳುತ್ತಿರುವುದನ್ನು ಉಲ್ಲೇಖಿಸಿದ ಪ್ರಧಾನಿ, ದೇಶ 75ನೇ ಸ್ವಾತಂತ್ರ್ಯೋತ್ಸವ ಆಚರಣೆ ಸಂದರ್ಭ ಅಂದರೆ 2022ರ ವೇಳೆಗೆ ಇಂಧನ ಆಮದು ಅವಲಂಬನೆಯನ್ನು ಶೇ 10ಕ್ಕೆ ಇಳಿಸಬೇಕು ಮತ್ತು ಈ ವಿಷಯದಲ್ಲಿ ಸ್ವಾವಲಂಬನೆ ಸಾಧಿಸಬೇಕು. ಇದು ನಮ್ಮ ಕನಸು ಎಂದು ನುಡಿದರು.
ಯುವಜನತೆ ಮತ್ತು ಸರ್ಕಾರ ಕೌಶಲ ಅಭಿವೃದ್ಧಿಗೆ ನೀಡುತ್ತಿರುವ ಒತ್ತು ಇಂಧನ ವಲಯದ ಸವಾಲುಗಳನ್ನು ಎದುರಿಸಲು ನೆರವಾಗಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.