ಬೆಂಗಳೂರು: ನೆರೆಹೊರೆಯ ಅನ್ಯಧರ್ಮದವರನ್ನು ಸಹೋದರರಂತೆ ಕಾಣಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ರಂಜಾನ್ ಪ್ರಯುಕ್ತ ರಾಜ್ಯ ಸರ್ಕಾರದ ವತಿಯಿಂದ ಅರಮನೆ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಮಾತನಾಡಿದರು.
ಧರ್ಮ ಧರ್ಮಗಳ ಮಧ್ಯೆ ಸಂಘರ್ಷ ಹುಟ್ಟುಹಾಕುವ ಶಕ್ತಿಗಳು ಸಮಾಜದಲ್ಲಿ ಜಾಗೃತವಾಗಿವೆ. ಇಂತಹವರ ವಿರುದ್ಧ ಎಚ್ಚರಿಕೆಯಿಂದ ಇದ್ದು ಶಾಂತಿ, ಸೌಹಾರ್ದ ವಾತಾವರಣವನ್ನು ಕಾಪಾಡಿಕೊಂಡು ಹೋಬೇಕು ಎಂದರು.
ಎಲ್ಲ ಧರ್ಮಗಳೂ ಸೌಹಾರ್ದತೆಯ ಸಿದ್ಧಾಂತವನ್ನೇ ಪ್ರತಿಪಾದಿಸುತ್ತವೆ. ಯಾರೊಬ್ಬರೂ ಸಹ ನಾನು ಇಂತಹ ಧರ್ಮದಲ್ಲಿಯೇ ಹುಟ್ಟಬೇಕು ಎಂದು ಬಯಸಿ ಜನಿಸಲು ಸಾಧ್ಯವಿಲ್ಲ. ನಾವು ಹುಟ್ಟಿದಾಗ ಧರ್ಮ ಇರುವುದಿಲ್ಲ. ಬದಲಿಗೆ ಮಾನವೀಯತೆ ಇರುತ್ತದೆ. ಇಂತಹ ಮಾನವೀಯತೆಯನ್ನು ದೇಹದಲ್ಲಿ ಉಸಿರು ಇರುವವರೆಗೂ ಕಾಪಾಡಿಕೊಂಡು ಹೋಗಬೇಕು ಎಂದು ಹೇಳಿದರು.
ಸಚಿವರಾದ ಕೆ.ಜೆ. ಜಾರ್ಜ್, ಆರ್. ರೋಷನ್ಬೇಗ್, ತನ್ವೀರ್ ಸೇಠ್, ಟಿ.ಬಿ. ಜಯಚಂದ್ರ, ಪ್ರಮೋದ್ ಮಧ್ವರಾಜ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕ ಎನ್.ಎ. ಹ್ಯಾರಿಸ್, ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಂತರ ಸಚಿವರ ಜೊತೆಗೂಡಿ ಸಿ.ಎಂ ಭೋಜನ ಸವಿದರು.