ನವದೆಹಲಿ (ಐಎಎನ್ಎಸ್): ಸುಪ್ರೀಂ ಕೋರ್ಟ್ ಪೀಠ ಮಧ್ಯರಾತ್ರಿಯ ನಂತರ ಸಮಾವೇಶಗೊಂಡು ಬೆಳಗಿನ ಜಾವದ ವರೆಗೂ ಅರ್ಜಿ ವಿಚಾರಣೆ ನಡೆಸಿದ (ಮೆಮನ್ ಪ್ರಕರಣ) ಪ್ರಸಂಗ ಇದೇ ಮೊದಲು.
ಆದರೆ, 1989ರಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಯಾಗಿದ್ದ ಇ.ಎಸ್. ವೆಂಕಟರಾಮಯ್ಯ ಅವರು ಉದ್ಯಮಿ ಲಲಿತ್ ಮೋಹನ್ ಥಾಪರ್ ಅವರ ಜಾಮೀನು ಅರ್ಜಿ ಬಗ್ಗೆ ಮಧ್ಯರಾತ್ರಿ ನಂತರ ತಮ್ಮ ನಿವಾಸದಲ್ಲಿ ವಿಚಾರಣೆ ನಡೆಸಿದ್ದರು.
‘ಅನ್ಯಾಯಕ್ಕೆ ಒಳಗಾದ ವ್ಯಕ್ತಿಗೆ ನ್ಯಾಯ ದೊರಕಿಸಿಕೊಡಲು ನನಗೆ ಯಾವುದೇ ಸಮಯ, ಸಂದರ್ಭ ಅಡ್ಡಿ ಬರುವುದಿಲ್ಲ’ ಎಂದು ಆಗ ಹೇಳಿದ್ದರು.
80ರ ದಶಕದಲ್ಲಿ ನಡೆದ ಇನ್ನೊಂದು ಪ್ರಕರಣದಲ್ಲಿ ಆಗಿನ ಮುಖ್ಯ ನ್ಯಾಯಮೂರ್ತಿ ವೈ.ವಿ. ಚಂದ್ರಚೂಡ ಅವರು, ಗಲ್ಲು ಶಿಕ್ಷೆ ಎದುರಿಸುತ್ತಿದ್ದ ಅಪರಾಧಿಯೊಬ್ಬನ ಪರ ವಕೀಲರ ತುರ್ತು ಟೆಲಿಗ್ರಾಂ ಮತ್ತು ತುರ್ತು ದೂರವಾಣಿ ಕರೆಗೆ ಸ್ಪಂದಿಸಿ, ಕೋರ್ಟ್ ಸಮಯದ ನಂತರವೂ ತಮ್ಮ ಮನೆಯಲ್ಲಿಯೇ ವಿಚಾರಣೆ ನಡೆಸಿ ಗಲ್ಲು ಶಿಕ್ಷೆಗೆ ತಡೆ ನೀಡಿದ್ದರು. ಆದರೆ ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಪೀಠ ಇದಕ್ಕೂ ಮುನ್ನ ಗಲ್ಲು ಶಿಕ್ಷೆ ದೃಢೀಕರಿಸಿತ್ತು.
*
ನಿರ್ಬಂಧ
ಮುಂಬೈ (ಪಿಟಿಐ): ಯಾಕೂಬ್ ಅಂತ್ಯಕ್ರಿಯೆಯ ವಿಡಿಯೊ ಚಿತ್ರೀಕರಣ ಹಾಗೂ ಭಾವಚಿತ್ರಗಳನ್ನು ತೆಗೆಯುವುದಕ್ಕೆ ಮಾಧ್ಯಮ ಪ್ರತಿನಿಧಿಗಳಿಗೆ ಪೊಲೀಸರು ಕಾನೂನು ಹಾಗೂ ಸುವ್ಯವಸ್ಥೆ ದೃಷ್ಟಿಯಿಂದ ನಿರ್ಬಂಧಿಸಿದ್ದರು.