ನವದೆಹಲಿ(ಪಿಟಿಐ): ಅಸಹಿಷ್ಣುತೆ ಕುರಿತಂತೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ಸಂವಿಧಾನದ ಆದರ್ಶ ಮತ್ತು ತತ್ವಗಳು ಅಪಾಯದಲ್ಲಿವೆ ಎಂದಿದ್ದಾರೆ.
ಸಂಸತ್ನ ಚಳಿಗಾಲದ ಅಧಿವೇಶನದ ಮೊದಲ ದಿನ ಗುರುವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆ ಅಂಗವಾಗಿ ನಡೆದ ಸಂವಿಧಾನ ಬದ್ಧತೆ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ‘ಇಂದು ಸಂವಿಧಾನ ಬದ್ಧತೆ ಬಗ್ಗೆ ಚರ್ಚೆ ನಡೆಯುವಂತಾಗಿದೆ. ಇದಕ್ಕಿಂತ ದೊಡ್ಡ ನಗೆಪಾಟಲಿನ ಸಂಗತಿ ಮತ್ತೊಂದಿಲ್ಲ’ ಎಂದರು.
ಸ್ವಾತಂತ್ರ್ಯ ಹೋರಾಟ ಹಾಗೂ ಸಂವಿಧಾನ ರಚನೆ ವೇಳೆ ಕಾಂಗ್ರೆಸ್ ನೀಡಿದ್ದ ಕೊಡುಗೆ ಹಾಗೂ ಅಂಬೇಡ್ಕರ್ ಅವರನ್ನು ಸ್ಮರಿಸಿದ ಸೋನಿಯಾ, ಕಳೆದ ಐದು ತಿಂಗಳಿಂದ ಸಂವಿಧಾನದ ತತ್ವಗಳಿಗೆ ವಿರುದ್ಧವಾದ ವಾತಾವರಣ ನಿರ್ಮಾಣವಾಗಿದೆ ಎಂದು ದೂರಿದರು.