ಜಮ್ಮು: ಸಂಸತ್ ಮೇಲಿನ ದಾಳಿ ಪ್ರಕರಣದಲ್ಲಿ ಗಲ್ಲಿಗೇರಿಸಲಾದ ಅಫ್ಜಲ್ ಗುರುವಿನ ಅವಶೇಷ ನೀಡುವಂತೆ ಪಿಡಿಪಿ ಸೋಮವಾರ ಕೇಂದ್ರವನ್ನು ಕೋರಿದೆ. ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿದ ಬೆನ್ನಲ್ಲೇ ಪಿಡಿಪಿಯ ಎಂಟು ಶಾಸಕರು ಈ ಹೊಸ ಬೇಡಿಕೆ ಇಡುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಅಫ್ಜಲ್ ಅವಶೇಷ ಹಿಂದಿರುಗಿಸುವ ತಮ್ಮ ಬೇಡಿಕೆಗೆ ಪಕ್ಷ ಬೆಂಬಲವಾಗಿ ನಿಂತಿದ್ದು, ಈ ವಿಷಯಕ್ಕೆ ಸಂಬಂಧಿಸಿಕೇಂದ್ರದ ಮೇಲೆ ನಿರಂತರ ಒತ್ತಡ ಹೇರುವುದಾಗಿ ಹೇಳಿದೆ ಎಂದು ಶಾಸಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಂಸತ್ ಮೇಲಿನ ದಾಳಿ ನಡೆಸಿದ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿದ್ದ ಅಫ್ಜಲ್ ಗುರುವನ್ನು 2013 ಫೆಬ್ರುವರಿ 9ರಂದು ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. ಅಫ್ಜಲ್ ಗಲ್ಲು ಶಿಕ್ಷೆಯನ್ನು ಮೊದಲಿನಿಂದಲೂ ವಿರೋಧಿಸುತ್ತ ಬಂದಿರುವ ಮತ್ತು ಆತನ ದೇಹದ ಅವಶೇಷಕ್ಕೆ ಒತ್ತಾಯಿಸುತ್ತಿರುವ ಪಕ್ಷದ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಶಾಸಕರು ಪುನರುಚ್ಚರಿಸಿದರು.