ಮೊನ್ನೆಯಷ್ಟೇ ಮುಗಿದ ಲೋಕಸಭಾ ಚುನಾವಣೆ ಸಂದರ್ಭ ಜೆ.ಪಿ.ನಗರ ಏಳನೇ ಹಂತದ ಮತಗಟ್ಟೆಯಾಚೆ ಮತದಾರರನ್ನು ಕೊನೆಯ ಕ್ಷಣದ ಮನವೊಲಿಕೆಯಲ್ಲಿ ತೊಡಗಿದ್ದ ರಾಜಕೀಯ ಪಕ್ಷದ ಬೆಂಬಲಿಗರನ್ನು ಹಿರಿಯ ನಾಗರಿಕರೊಬ್ಬರು, ಸುಸ್ಥಿತಿಯಲ್ಲಿದ್ದ ರಸ್ತೆಗಳನ್ನು ಮೋರಿ, ಮ್ಯಾನ್ಹೋಲ್ ದುರಸ್ತಿ ಹೆಸರಿನಲ್ಲಿ ಹಾಳುಗೆಡವಿ ಇಟ್ಟ ನಿಮಗೆ ಯಾಕೆ ವೋಟು ಹಾಕಬೇಕು ಎಂದು ತರಾಟೆಗೆ ತೆಗೆದುಕೊಂಡರು. ಸುತ್ತಮುತ್ತಲಿದ್ದ ಅದೇ ಪಕ್ಷದವರೂ, ಸಾರ್ವಜನಿಕರೂ ಜೋರಾಗಿ ನಕ್ಕರು.
ಬೆಂಗಳೂರಿನ ಬಹುತೇಕ ಎಲ್ಲಾ ಪ್ರದೇಶಗಳ ಒಳರಸ್ತೆಗಳು, ಸರ್ವಿಸ್ ರಸ್ತೆಗಳು ಕಳೆದ ಮಳೆಗಾಲದಿಂದೀಚೆ ಬರಿಯ ಹಳ್ಳದಿಣ್ಣೆಗಳ ಕೊಂಪೆಯಾಗಿ ಮಾರ್ಪಟ್ಟಿರುವುದನ್ನು ಪ್ರತಿಯೊಬ್ಬರೂ ಕಂಡಿದ್ದೇವೆ, ಅದರಲ್ಲಿ ನಡೆದಾಡಲೂ, ವಾಹನಗಳಲ್ಲಿ ಸಂಚರಿಸಲೂ ಆಗದೆ ಪಾಡುಪಡುತ್ತಲೇ ಇದ್ದೇವೆ.