ನವದೆಹಲಿ (ಪಿಟಿಐ): ರೈಲ್ವೆ ಸಚಿವ ಸದಾನಂದ ಗೌಡ ಅವರು ಮಂಡಿಸಿದ ಬಜೆಟ್ ಅನ್ನು ‘ದೂರಗಾಮಿ ಹಾಗೂ ಅಭಿವೃದ್ಧಿ ಕೇಂದ್ರಿತ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.
ಬಜೆಟ್ನಲ್ಲಿ ದೇಶದ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಶ್ರೀಸಾಮಾನ್ಯ ನಿರೀಕ್ಷಿಸಿದಂತೆ ಉತ್ತಮ ಸೇವೆ, ವೇಗ ಹಾಗೂ ಸುರಕ್ಷತೆಗೆ ಒತ್ತು ನೀಡಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ದೂರಗಾಮಿ ಹಾಗೂ ಅಭಿವೃದ್ಧಿ ಆಧಾರಿತ ಬಜೆಟ್ ಮಂಡಿಸಿದ ರೈಲ್ವೆ ಸಚಿವ ಸದಾನಂದಗೌಡ ಅವರಿಗೆ ಧನ್ಯವಾದಗಳು. ಅವರು ಮಂಡಿಸಿದ ಬಜೆಟ್ ಶ್ರೀಸಾಮಾನ್ಯನ ಪರವಾಗಿದೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಅಲ್ಲದೇ, ‘ಈ ಬಜೆಟ್ ಉತ್ತಮ ಸೇವೆ, ವೇಗ ಹಾಗೂ ಸುರಕ್ಷತೆಯನ್ನು ಅಪೇಕ್ಷಿಸಿದೆ. ಭಾರತದ ಏಳಿಗೆಗೆ ಕೊಡುಗೆ ನೀಡುವ ಆಧುನಿಕ ರೈಲ್ವೆ ನಿರ್ಮಾಣದತ್ತ ಮಾಡಿದ ಪ್ರಯತ್ನವಾಗಿದೆ’ ಎಂದು ಶ್ಲಾಘಿಸಿದ್ದಾರೆ.
ಬಜೆಟ್ ಬಗೆಗೆ ಸರಣಿ ಟ್ವೀಟ್ ಮಾಡಿರುವ ಮೋದಿ ಅವರು, ‘ಭಾರತೀಯ ರೈಲ್ವೆಯನ್ನು ನಾವು ಎಷ್ಟು ಎತ್ತರಕ್ಕೆ ಬೆಳೆಸಬೇಕು ಹಾಗೂ ರೈಲ್ವೆ ಮೂಲಕ ನಾವು ಭಾರತವನ್ನು ಎಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂಬುದನ್ನು ಬಜೆಟ್ ಬಿಚ್ಚಿಟ್ಟಿದೆ’ ಎಂದೂ ಟ್ವೀಟ್ ಮಾಡಿದ್ದಾರೆ.