ಮುಜಫ್ಫರ್ನಗರ (ಪಿಟಿಐ): ಉತ್ತರ ಪ್ರದೇಶದ ಬಿಜೆಪಿ ಉಸ್ತುವಾರಿಯಾಗಿರುವ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಮಿತ್ ಷಾ ಅವರ ವಿರುದ್ಧ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಶನಿವಾರ ಮತ್ತೆರಡು ಮೊಕದ್ದಮೆಗಳು ದಾಖಲಾಗಿವೆ.
ಚುನಾವಣಾ ಆಯೋಗದ ಸೂಚನೆಯಂತೆ ಷಾ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) 188 ಕಲಂ (ಸರ್ಕಾರಿ ಅಧಿಕಾರಿ ಕಾನೂನಿನ್ವಯ ನೀಡಿದ ಆದೇಶ ಪಾಲಿಸದಿರುವುದು), ಪ್ರಜಾಪ್ರತಿನಿಧಿ ಕಾಯ್ದೆಯ 123 (3) ಕಲಂ (ಅಭ್ಯರ್ಥಿಯ ಧರ್ಮ, ಜಾತಿ– ಜನಾಂಗ, ಸಮುದಾಯ– ಭಾಷೆಯನ್ನು ಆಧರಿಸಿ ಮತ ನೀಡುವಂತೆ ಕೋರುವುದು) ಅನ್ವಯ ಕಕ್ರೋಲಿ ಮತ್ತು ಹೊಸಮಂಡಿ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಇಂದ್ರಾಮಣಿ ತ್ರಿಪಾಠಿ ತಿಳಿಸಿದ್ದಾರೆ.
ಮುಜಫ್ಫರ್ನಗರ ಜಿಲ್ಲೆಯ ಬಡ್ವಾರ್ ಗ್ರಾಮದಲ್ಲಿ ಏ. 4ರಂದು ನಡೆದ ರ್್ಯಾಲಿಯಲ್ಲಿ ಷಾ ಅವರು, ‘ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದರೆ, ಮುಲ್ಲಾ ಮುಲಾಯಂ ಅವರ ಸರ್ಕಾರ ಪತನವಾಗಲಿದೆ’ ಎಂದಿದ್ದರು.
ಆಯೋಗಕ್ಕೆ ಷಾ ಮನವಿ: ನವದೆಹಲಿ: ಉತ್ತರಪ್ರದೇಶದಲ್ಲಿ ಬಹಿರಂಗ ಪ್ರಚಾರ ಕೈಗೊಳ್ಳದಂತೆ ತಮ್ಮ ಮೇಲೆ ಹೇರಿದ ನಿರ್ಬಂಧವನ್ನು ಪುನರ್ಪರಿಶೀಲಿಸುವಂತೆ ಅಮಿತ್ ಷಾ ಚುನಾವಣಾ ಆಯೋಗಕ್ಕೆ ಶನಿವಾರ ಮನವಿ ಮಾಡಿಕೊಂಡಿದ್ದಾರೆ.
ಆಯೋಗ ಕ್ರಮ ದುಃಖಕರ: ಬಿಜೆಪಿ
ಅಹಮದಾಬಾದ್: ಗುಜರಾತ್ನ ಮಾಜಿ ಗೃಹ ಸಚಿವ ಅಮಿತ್ ಷಾ ಅವರ ವಿರುದ್ಧ ಚುನಾವಣಾ ಆಯೋಗ ಜರುಗಿಸಿರುವ ಕ್ರಮ ಅತ್ಯಂತ ದುಃಖಕರ ಎಂದು ಬಿಜೆಪಿ ಶನಿವಾರ ಹೇಳಿದೆ.
‘ಷಾ ಅವರ ವಿರುದ್ಧ ತೆಗೆದುಕೊಂಡಿರುವ ಕ್ರಮದ ಬಗ್ಗೆ ಕಾನೂನಿನ ಅಭಿಪ್ರಾಯ ಪಡೆದುಕೊಳ್ಳಲಾಗುವುದು’ ಎಂದು ಪಕ್ಷದ ಮಾಧ್ಯಮ ಮುಖ್ಯ ಸಮನ್ವಕಾರ ರವಿಶಂಕರ್ ಪ್ರಸಾದ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಅವರು ಹಿಂಸಾಚಾರ, ಉದ್ವಿಗ್ನ ಸ್ಥಿತಿ ಬಗ್ಗೆ ಯಾವುದೇ ಮಾತುಗಳನ್ನಾಡಿಲ್ಲ. ಸಮಾಜವಾದಿ ಪಕ್ಷ, ಕಾಂಗ್ರೆಸ್ ನಿಮ್ಮನ್ನು (ಜನತೆ) ಸಂಕಟಕ್ಕೆ, ಶೋಷಣೆಗೆ ದೂಡಿದ್ದರೆ ಆ ಪಕ್ಷಗಳ ವಿರುದ್ಧ ಮತ ಚಲಾಯಿಸಿ ಎಂದಿದ್ದರು’ ಎಂದು ಷಾ ಅವರನ್ನು ಸಮರ್ಥಿಸಿಕೊಂಡರು.
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಕೂಡ ಓಹಿಯೊದಲ್ಲಿ ನಡೆದಿದ್ದ ಪ್ರಚಾರ ಸಭೆಯಲ್ಲಿ ‘ಮತಚಲಾವಣೆ ಮೂಲಕ ಪ್ರತೀಕಾರ ತೀರಿಸಿಕೊಳ್ಳಿ’ ಎನ್ನುವ ಮಾತನ್ನು ಆಡಿದ್ದರು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.