ಕೊಂಡುಕುರಿಗಳ ಅಭಯಾರಣ್ಯ ಎಂದೇ ಹೆಸರುವಾಸಿಯಾಗಿರುವ ಜಗಳೂರು ತಾಲ್ಲೂಕಿನ ಕೊಂಡುಕುರಿ ವನ್ಯಧಾಮಕ್ಕೆ ಕಳ್ಳಬೇಟೆಗಾರರು ಬೆಂಕಿ ಹಾಕಿದ ಹಿನ್ನೆಲೆಯಲ್ಲಿ ವನ್ಯಮೃಗಗಳು ಜೀವಭೀತಿಯಿಂದ ದಿಕ್ಕಾಪಾಲಾಗಿ ಓಡಿ ಅರಣ್ಯದ ಸುತ್ತಲಿನ ಹಳ್ಳಿಗಳನ್ನು ಪ್ರವೇಶಿಸಿ ಗ್ರಾಮಸ್ಥರ ಮೇಲೆ ದಾಳಿ ಮಾಡಿವೆ. ಅಳಿವಿನ ಅಂಚಿಗೆ ಸರಿದಿರುವ ಕೊಂಡುಕುರಿಗಳನ್ನು ಉಳಿಸುವ ಉದ್ದೇಶದ, ಏಷ್ಯಾಖಂಡದ ಪ್ರಥಮ ಕೊಂಡುಕುರಿ ಅಭಯಾರಣ್ಯದಲ್ಲಿ ಯುಗಾದಿ ಅಮಾವಾಸ್ಯೆಯಂದು ಸಾಂಪ್ರದಾಯಿಕವಾಗಿ ನಡೆಯುವ ಬೇಟೆಯನ್ನು ತಡೆಯಲು ಯತ್ನಿಸಿದಾಗ ಬೇಟೆಗಾರರ ಗುಂಪು ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ವಾಹನಕ್ಕೆ ಹಾನಿ ಮಾಡಿ ಕಾಡಿಗೆ ಬೆಂಕಿ ಹಚ್ಚಿ ದಿನಗಳೇ ಕಳೆದಿವೆ. ಸುಮಾರು ಎಂಟು ಸಾವಿರ ಎಕರೆ ಕಾಡು ಬೆಂಕಿಗೆ ಆಹುತಿಯಾಗಿದೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ದುಷ್ಕರ್ಮಿಗಳನ್ನು ಬಂಧಿಸುವ ಗೋಜಿಗೆ ಹೋಗಿಲ್ಲ. ಕಾಡನ್ನು ಕಾಯುವ ಸಿಬ್ಬಂದಿ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ. ಅಪರಾಧಕ್ಕೆ ಕಾರಣರಾದ ಕಳ್ಳಬೇಟೆಗಾರರು ಎಲ್ಲೂ ಓಡಿಹೋಗಿಲ್ಲ. ಕಾಡಿನ ಅಂಚಿನಲ್ಲಿಯೇ ಗುಂಪು ಕಟ್ಟಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅರಣ್ಯದಲ್ಲಿ ಬೇಟೆಯಾಡುವುದು ಕಾನೂನಿನ ಪ್ರಕಾರ ಅಪರಾಧ. ಇದನ್ನು ತಡೆಯಲು ಹೋದ ಸಿಬ್ಬಂದಿಯ ಮೇಲೆ ಹಲ್ಲೆ ಮಾಡುವುದು ಅಕ್ಷಮ್ಯ. ಈ ಬಗ್ಗೆ ಪೊಲೀಸ್ ಇಲಾಖೆ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಪೊಲೀಸ್ ಇಲಾಖೆಯ ನಿಷ್ಕ್ರಿಯತೆಯನ್ನು ಎತ್ತಿ ಹೇಳುತ್ತದೆ. ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ನಡುವೆ ಸಮನ್ವಯ ಕೊರತೆ ಮೊದಲಿನಿಂದಲೂ ಇದೆ. ಈ ಕೊರತೆ ಈ ಪ್ರಕರಣದಲ್ಲಿಯೂ ದೊಡ್ಡದಾಗಿ ಕಾಣುತ್ತಿದೆ.
ಘಟನೆ ನಡೆದು ನಾಲ್ಕೈದು ದಿನಗಳೇ ಕಳೆದರೂ ತಮ್ಮ ಮೇಲಿನ ಹಲ್ಲೆಯನ್ನು ಖಂಡಿಸಿ ಅರಣ್ಯ ಇಲಾಖೆಯ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸಕ್ಕೇ ಹೋಗಿಲ್ಲ. ಇದನ್ನು ಪ್ರತಿಭಟನೆ ಎನ್ನುವ ಬದಲು ಕರ್ತವ್ಯ ನಿರ್ಲಕ್ಷ್ಯ ಎಂದೇ ವ್ಯಾಖ್ಯಾನ ಮಾಡಬೇಕು. ಉಪ ಅರಣ್ಯ ಸಂರಕ್ಷಣಾಧಿಕಾರಿಯನ್ನು ಚುನಾವಣಾ ಕರ್ತವ್ಯಕ್ಕೆ ನೇಮಿಸಿದ ಹಿನ್ನೆಲೆಯಲ್ಲಿ ಅವರು ಬೆಂಕಿ ಬಿದ್ದ ಜಾಗಕ್ಕೆ ತೆರಳಿಲ್ಲ. ಜೊತೆಗೆ ಅವರನ್ನು ವರ್ಗ ಸಹ ಮಾಡಲಾಗಿದೆ. ರಾಷ್ಟ್ರೀಯ ಉದ್ಯಾನ, ಅಭಯಾರಣ್ಯ ಹಾಗೂ ಹುಲಿ ಅಭಯಾರಣ್ಯಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಮತ್ತು ವಾಹನಗಳನ್ನು ಚುನಾವಣಾ ಕಾರ್ಯಕ್ಕೆ ಬಳಸಬಾರದು ಎಂದು ಕೇಂದ್ರ ಚುನಾವಣಾ ಆಯೋಗವು ೧೯೯೮ರಲ್ಲಿಯೇ ಆದೇಶ ಹೊರಡಿಸಿದೆ.
ಈ ಆದೇಶದ ವ್ಯಾಪ್ತಿಯನ್ನು ಸಂಪೂರ್ಣ ಅರಣ್ಯ ಇಲಾಖೆಗೆ ವಿಸ್ತರಿಸಬೇಕು. ಬೇಸಿಗೆಯಲ್ಲಿ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಾಕುವುದು ಹೆಚ್ಚಾಗುತ್ತಿದೆ. ಇಲ್ಲಿ ಬಿದ್ದ ಮಳೆಯಿಂದ ಸ್ವಾಭಾವಿಕವಾಗಿಯೇ ಕೆಲವು ಕಡೆ ಈಗ ಬೆಂಕಿ ನಂದಿದೆ. ಚುನಾವಣಾ ಕಾರ್ಯಕ್ಕೆ ನೇಮಿಸಲಾಗಿದ್ದರೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಕರ್ತವ್ಯ ಮರೆಯಬಾರದಿತ್ತು. ಅರಣ್ಯ ಸಂರಕ್ಷಣಾಧಿಕಾರಿ ಸಹ ಕಾಡಿಗೆ ಹೋಗುವುದನ್ನು ಯಾವ ಕಾರಣಕ್ಕೆ ಮರೆತರು ಎನ್ನುವ ಪ್ರಶ್ನೆಗೆ ಉತ್ತರ ದೊರಕಬೇಕಿದೆ. ಕಾಡು ನಾಶ ಹೆಚ್ಚುತ್ತಿರುವಾಗ ಇಂತಹ ಘಟನೆಗಳಿಗೆ ಕಾರಣವಾದ ದುರುಳರ ಮೇಲೆ ಕಾನೂನು ಕ್ರಮ ಜರುಗಿಸಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.