ರಾಮನಗರ: ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಅವರಿಗೆ ನೀಡಿರುವ ಅರೆ ನ್ಯಾಯಾಂಗದ ಅಧಿಕಾರ ದುರುಪಯೋಗ ಆಗುತ್ತಿದ್ದು, ಸರ್ಕಾರ ಕೂಡಲೇ ಈ ಅಧಿಕಾರವನ್ನು ಹಿಂಪಡೆಯಬೇಕು ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಆಗ್ರಹಿಸಿದರು.
ಬಿಡದಿ ಹೋಬಳಿಯ ಬನ್ನಿಕುಪ್ಪೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು. ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಅವರು ಯಾರದ್ದೋ ಪ್ರಭಾವ ಅಥವಾ ಮತ್ತಿತರ ಒತ್ತಡಗಳಿಂದ ತಮ್ಮ ಅರೆ ನ್ಯಾಯಾಂಗ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಕಾನೂನಾತ್ಮಕವಾಗಿ ಆದೇಶ ನೀಡುವ ಬದಲಿಗೆ, ಕಾನೂನಿನ ಚೌಕಟ್ಟು ಮೀರಿ ಆದೇಶಗಳನ್ನು ಹೊರಡಿಸುತ್ತಿದ್ದಾರೆ ಎಂದು ದೂರಿದರು.
ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಅವರು ಹಲವು ಪ್ರಕರಣಗಳಲ್ಲಿ ಈ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ದಾಖಲೆ ಇದೆ. ಅದನ್ನು ಸಂಗ್ರಹಿಸಿದ್ದು, ಶೀಘ್ರದಲ್ಲಿಯೇ ಅವುಗಳನ್ನು ಉಲ್ಲೇಖಿಸಿ ಇಬ್ಬರೂ ಅಧಿಕಾರಿಗಳಿಗೆ ಪತ್ರ ಬರೆಯುತ್ತೇನೆ. ಅಲ್ಲದೆ ಮಾಧ್ಯಮದವರ ಮುಂದೆ ಅದೆಲ್ಲವನ್ನೂ ಬಹಿರಂಗ ಪಡಿಸುತ್ತೇನೆ ಎಂದು ಅವರು ಹೇಳಿದರು.
ಕಾನೂನಾತ್ಮಕ ಆದೇಶಗಳನ್ನು ನೀಡಬೇಕಾದ ಜಾಗದಲ್ಲಿ ಕುಳಿತುಕೊಂಡು ಈ ಅಧಿಕಾರಿಗಳು ಕಾನೂನು ಬಿಟ್ಟು ಕೆಲಸ ಮಾಡುತ್ತಿದ್ದಾರೆ. ಈ ಅಧಿಕಾರ ದುರ್ಬಳಕೆ ಆಗುವುದನ್ನು ತಡೆಯಬೇಕಿದೆ ಎಂದು ಅವರು ಪ್ರತಿಪಾದಿಸಿದರು.