ರಾಮನಗರ: ನಗರದ ಇತಿಹಾಸ ಪ್ರಸಿದ್ಧ ಅರ್ಕೇಶ್ವರ ಸ್ವಾಮಿ ದೇವಾಲಯದ ಶುದ್ಧೀಕರಣ ಕಾರ್ಯಕ್ಕೆ ಸೋಮವಾರ ಚಾಲನೆ ದೊರೆಯಿತು.
ಇತ್ತೀಚೆಗೆ ದುಷ್ಕರ್ಮಿಯೊಬ್ಬ ದೇವಾಲಯವನ್ನು ಹಾನಿಗೊಳಿಸಿದ್ದ. ಹಾಗಾಗಿ ದೇವಾಲಯ ಶುದ್ಧೀಕರಣವಾಗಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಈ ಸಂಬಂಧ ಜಿಲ್ಲಾಡಳಿತ, ಮುಜರಾಯಿ ಇಲಾಖೆಯ ಸಮ್ಮತಿಯೊಂದಿಗೆ ದೇವಾಲಯ ಜೀರ್ಣೋದ್ಧಾರ ಸಮಿತಿಯು ಮೂರು ದಿನಗಳ ಶುದ್ಧೀಕರಣ ಕಾರ್ಯ ಕೈಗೊಂಡಿದೆ. ಮೈಸೂರಿನ ಭಾನುಪ್ರಕಾಶ್ ಶರ್ಮ ಅವರ ನೇತೃತ್ವದಲ್ಲಿ ಈ ಕಾರ್ಯ ಹಮ್ಮಿಕೊಳ್ಳಲಾಗಿದೆ.
ಮೊದಲ ದಿನವಾದ ಸೋಮವಾರ ಕಲಶ ಕುಂಬಾಭಿಷೇಕ, ಶೋಭಾಯಾತ್ರೆ ಕಾರ್ಯ ಸೇರಿದಂತೆ ಧಾರ್ಮಿಕ ಚಟುವಟಿಕೆಗಳು ನೆರವೇರಿತು.
ಏಳು ನದಿಗಳಿಂದ ತಂದ ಪವಿತ್ರ ನೀರು, ಕಲಶಗಳನ್ನು ಒಳಗೊಂಡ ಶೋಭಾಯಾತ್ರೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.
ನ್ಯಾಯಾಲಯ ರಸ್ತೆಯಿಂದ ಆರಂಭವಾದ ಯಾತ್ರೆಯು ಛತ್ರದ ಬೀದಿ, ಅಗ್ರಹಾರ, ಎಂ.ಜಿ.ರಸ್ತೆ, ಮಂಡಿ ಪೇಟೆ, ಮುಖ್ಯ ರಸ್ತೆಯಲ್ಲಿ ಸಂಚರಿಸಿ ನಂತರ ದೇವಾಲಯ ಸೇರಿತು.
ಮೆರವಣಿಗೆಯಲ್ಲಿ ತಹಸಿಲ್ದಾರ್ ಮಂಜಪ್ಪ, ಮಾಜಿ ಶಾಸಕ ಕೆ.ರಾಜು, ಮುಖಂಡರಾದ ಮರಿದೇವರು, ಎಸ್.ಆರ್.ನಾಗರಾಜು, ರಾಜಶೇಖರ್, ಪುಟ್ಟರಾಜು, ನರಸಿಂಹಯ್ಯ, ಜಿ.ವಿ.ಪದ್ಮನಾಭ, ದೇವಾಲಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಿ.ಎನ್.ಆರ್.ವೆಂಕಟೇಶ್, ಪದಾಧಿಕಾರಿಗಳಾದ ಕೆ.ಆರ್.ನಾಗೇಶ್, ಎಸ್.ಟಿ.ನಂದೀಶ್, ನಗರಸಭಾ ಸದಸ್ಯರುಗಳು, ನಗರದ ಹಿಂದೂ ನಾಗರಿಕರು ಭಾಗವಹಿಸಿದ್ದರು.
ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ದೇವಾಲಯದ ಆವರಣದಲ್ಲಿ ಮಂಟಪ ಪೂಜೆ, ಗಣಪತಿ ಪೂಜೆ, ಪುಣ್ಯಾಹ, ಪಂಚಗವ್ಯ, ರಕ್ಷಾಬಂಧನ, ವಾಸ್ತು ರಾಕ್ಷೊಘ್ನ ಹೋಮ, ಬಿಂಬ ಶುದ್ದಿ ಮುಂತಾದ ಕಾರ್ಯಕ್ರಮಗಳು ನೆರೆವೇರದವು. ಮಂಗಳವಾರ ಶತರುದ್ರ ಪಾರಾಯಣ, ಶತರುದ್ರಾಭಿಷೇಕ, ರುದ್ರ ಕ್ಷಮಾಯಾರ್ಚನೆ, ರುದ್ರಹೋಮ, ಕರ್ಮಂಗ ಪುಣ್ಯಾಹ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.ಇದೇ 3ರ ಬುಧವಾರ ಬೆಳಿಗ್ಗೆ 9 ರಿಂದ 10 ಗಂಟೆಯೊಳಗೆ ಗೋಪುರ ಕುಂಬಾಭಿಷೇಕ ಕಾರ್ಯಕ್ರಮ ಜರುಗಲಿದೆ. ಮೆರವಣಿಗೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ನಡೆಯದಂತೆ ನೋಡಿಕೊಳ್ಳಲು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.