ಅನಂತಮೂರ್ತಿ ಅವರ ನಿಧನಕ್ಕೆ ಕೆಲವರು ಪ್ರತಿಕ್ರಿಯಿಸಿದ ರೀತಿ ಮಾನವೀಯತೆಯುಳ್ಳ ಯಾವುದೇ ಧರ್ಮ ಅಥವಾ ವಿವೇಕವುಳ್ಳ ಯಾರೇ ಆಗಲಿ ಒಪ್ಪುವಂತಹ ವಿಚಾರವಲ್ಲ. ಅನಂತಮೂರ್ತಿ ಅವರ ಸಾಧನೆಗಳ ಬಗೆಗೆ ಕನಿಷ್ಠ ತಿಳಿವಳಿಕೆಯುಳ್ಳ ಯಾರೊಬ್ಬರೂ ಹೀಗೆ ವರ್ತಿಸಲು ಸಾಧ್ಯವಿಲ್ಲ. ಸ್ವಂತ ಆಲೋಚನೆಗಳಿಲ್ಲದೆ ಯಾರೋ ಹೇಳಿದ್ದನ್ನು ಕೇಳಿ, ಕೊನೇಪಕ್ಷ ಅದನ್ನು ವಿಮರ್ಶಿಸುವ ಗೋಜಿಗೂ ಹೋಗದೆ ನಿರ್ಧಾರಗಳನ್ನು ತೆಗೆದುಕೊಂಡರೆ ಆಗುವುದೇ ಹೀಗೆ. ಆದರೆ ಯಾರೋ ಕೆಲವರು ಮಾಡಿದ ತಪ್ಪಿಗೆ ಇಡೀ ಸಂಘಟನೆಯನ್ನು ದೂರುವುದು ಸಹ ತಪ್ಪು.
ಅನಂತಮೂರ್ತಿ ತಮ್ಮ ಬರಹಗಳ ಮೂಲಕ ಪ್ರತಿಪಾದಿಸಿದ ಜಾತ್ಯತೀತ, ಮಾನವೀಯ ಕಾಳಜಿಯ ಗುಣಗಳು ಗಮನಾರ್ಹವಾದವು. ಸಾಹಿತಿ ಎಂದರೆ ಕೇವಲ ಕಲ್ಪನೆಗಳನ್ನು ಬರೆದುಕೊಂಡು ಕೂಡುವವನಲ್ಲ, ಆತನಿಗೂ ಸಾಮಾಜಿಕ ಜವಾಬ್ದಾರಿಗಳಿರುತ್ತವೆ ಎನ್ನುವ ತತ್ವದಲ್ಲಿ ನಂಬಿಕೆ ಇಟ್ಟಿದ್ದ ಅವರು, ಅನೇಕ ಕನ್ನಡ ಪರ ಚಳವಳಿಗಳಲ್ಲಿ ಪಾಲ್ಗೊಂಡಿದ್ದರು. ತಮ್ಮ ವೈಚಾರಿಕ ಬರಹಗಳ ಮೂಲಕ ಜನರಲ್ಲಿನ ಮೌಢ್ಯವನ್ನು ದೂರ ಮಾಡಲು ಶ್ರಮಿಸಿದರು. ಭಿನ್ನಾಭಿಪ್ರಾಯಗಳಿದ್ದಲ್ಲಿ ಅವರೊಂದಿಗೆ ವಾಗ್ವಾದ ನಡೆಸಲು ಅವಕಾಶ ಇರುತ್ತಿತ್ತು. ಕೆಲವೊಮ್ಮೆ ಅವರು ಕೂಡ ತಪ್ಪಿದ್ದು ಇಲ್ಲಿಯೇ ಅನಿಸುತ್ತದೆ. ವ್ಯಕ್ತಿಯೊಬ್ಬ ಒಂದು ಹಂತಕ್ಕೆ ಬೆಳೆದ ಬಳಿಕ ಆತನಿಗೆ ತಾನು ನಂಬಿದಂತಹ ತತ್ವ, ವಿಚಾರಗಳ ಮೇಲಿನ ನಂಬಿಕೆ ಪ್ರಬಲವಾಗಿಯೇ ಬೇರುಬಿಟ್ಟಿರುತ್ತದೆ. ಆ ಹಂತದಲ್ಲಿ ಕೆಲವು ವಿಚಾರಗಳನ್ನು ತನ್ನ ಆಲೋಚನಾ ಪರಿಧಿಯೊಳಕ್ಕೆ ತೆಗೆದುಕೊಳ್ಳದೇ ಅಭಿಪ್ರಾಯಗಳನ್ನು ಮಂಡಿಸಿಬಿಡುವ ಸಾಧ್ಯತೆ ಇರುತ್ತದೆ. ಬಹುಶಃ ಇಂತಹ ಸಂದರ್ಭದಲ್ಲೇ ಅವರು ಯಾವುದೋ ಪಕ್ಷದ ಹುಸಿ ಜಾತ್ಯತೀತ ನಿಲುವನ್ನೇ ಸತ್ಯ ಎಂದು ಭಾವಿಸಿಕೊಂಡು, ಅದನ್ನು ಬೆಂಬಲಿಸುವ ಭರದಲ್ಲಿ ನರೇಂದ್ರ ಮೋದಿ ಅವರ ವ್ಯಕ್ತಿತ್ವದ ಬಗ್ಗೆ ಲಘುವಾಗಿ ಮಾತನಾಡಿದ್ದಿರಬಹುದು. ನಿಜಕ್ಕೂ ಆ ಹೇಳಿಕೆ ಖಂಡನಾರ್ಹ.
ಕಾದಂಬರಿಕಾರ ಎಸ್.ಎಲ್. ಭೈರಪ್ಪನವರನ್ನು ‘ಅವರೊಬ್ಬ ಕಾದಂಬರಿಕಾರರೇ ಅಲ್ಲ’ ಎಂದದ್ದು ಕೂಡ ಒಪ್ಪುವಂತಹ ಮಾತಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಇತ್ತೀಚಿನ ವರ್ಷಗಳಲ್ಲಿ ವಿಚಾರವಾದದ ಹೆಸರಿನಲ್ಲಿ ಒಂದು ಕೋಮಿನ, ಒಂದು ಪಕ್ಷದ ಪರವಾಗಿ ಇದ್ದಾರೇನೋ ಎನ್ನುವಂತಹ ರೀತಿಯಲ್ಲಿ ಅನಂತಮೂರ್ತಿ ತಮ್ಮನ್ನು ತೋರಿಸಿಕೊಂಡರು. ಆದರೆ ಯಾರೊಬ್ಬರೂ ಪರಿಪೂರ್ಣರಲ್ಲ ಎನ್ನುವ ಮಾತಿಗೆ ಅವರೂ ಹೊರತಲ್ಲ. ಅನಂತಮೂರ್ತಿ ಅವರ ನಿಧನಕ್ಕೆ ಸಂಭ್ರಮಿಸಿದವರನ್ನು ಬೆಂಬಲಿಸುವ ರೀತಿಯಲ್ಲಿ ಸ್ವಾಮೀಜಿಯೊಬ್ಬರು ನೀಡಿದ ಹೇಳಿಕೆ ಇಡೀ ಹಿಂದೂ ಧರ್ಮಕ್ಕೆ ಅವಮಾನ. ಇವರು ಸಂಕಲ್ಪ ಮಾಡಿಕೊಂಡಿದ್ದಕ್ಕೆ ದೇವರು ಅವರನ್ನು ಕರೆದುಕೊಂಡರಂತೆ. ‘ಇದು ಎಲ್ಲರಿಗೂ ಪಾಠವಾಗಬೇಕು’ ಎಂದು ಮಾಧ್ಯಮದ ಮುಂದೆ ಸ್ವಾಮೀಜಿ ಘಂಟಾಘೋಷವಾಗಿ ಹೇಳಿದ್ದು ಪ್ರಜ್ಞಾವಂತರು ತಲೆತಗ್ಗಿಸುವಂತಿತ್ತು. ನಮ್ಮ ಧರ್ಮ ಯಾವತ್ತೂ ಬೇರೆಯವರ ಸಾವಿನಲ್ಲಿ ಸಂಭ್ರಮವನ್ನು ಕಂಡುಕೊಳ್ಳುವಂತಹ ವಿಕೃತಿಯನ್ನು ಬೋಧಿಸುವುದಿಲ್ಲ. ಇಂತಹ ಹೇಳಿಕೆ ಮೂಲಕ ಸಮಾಜಕ್ಕೆ ತಾವೇನು ಸಂದೇಶ ಸಾರಲು ಹೊರಟಿದ್ದಾರೆ ಎಂಬುದನ್ನು ಸ್ವಾಮೀಜಿಯೇ ಹೇಳಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.